ಪರಿಸರ ಕಾಯ್ದೆ: ಜನಮತ ಸಂಗ್ರಹಕ್ಕೆ ಕೇಂದ್ರದ ಕೊಡಲಿಯೇಟು
ಪರಿಸರ ಪರಿಣಾಮ ಕಾನೂನುಗಳ ಬಗ್ಗೆ ಜನಾಭಿಪ್ರಾಯದ ಅವಧಿ ವಿಸ್ತರಣೆಗೆ ಜಾವ್ಡೇಕರ್ ನಕಾರ
ಹೊಸದಿಲ್ಲಿ,ಜೂ.26:ನರೇಂದ್ರ ಮೋದಿ ಸರಕಾರದ ಪರಿಸರ ಪರಿಣಾಮಗಳ ಮೌಲ್ಯಮಾಪನ ಕಾಯ್ದೆ ಕುರಿತು ಸಾರ್ವಜನಿಕರ ಅಭಿಪ್ರಾಯಗಳನ್ನು ಸ್ವೀಕರಿಸುವ ಕಾಲಾವಧಿಯನ್ನು ವಿಸ್ತರಿಸಬೇಕೆಂಬ ತನ್ನ ಸಚಿವಾಲಯದ ಹಿರಿಯ ಅಧಿಕಾರಿಗಳ ಶಿಫಾರಸುಗಳನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ತಳ್ಳಿಹಾಕಿದ್ದಾರೆಂದು Thewire.in ಆನ್ಲೈನ್ ಸುದ್ದಿಜಾಲ ತಾಣ ಶುಕ್ರವಾರ ವರದಿ ಮಾಡಿದೆ.
ಈ ವಿಷಯದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ತಾನು ಪಡೆದಿರುವ ದಾಖಲೆಗಳನ್ನು ಅದು ವರದಿಯಲ್ಲಿ ಉಲ್ಲೇಖಿಸಿದೆ.
ಪ್ರಸ್ತಾವಿತ ಪರಿಸರ ಪರಿಣಾಮ ಮೌಲ್ಯಮಾಪನ ಕಾಯ್ದೆಯ ಕುರಿತಾದ ಸಾರ್ವಜನಿಕರ ಪ್ರತಿಕ್ರಿಯೆ ಹಾಗೂ ಆಕ್ಷೇಪಗಳ ಸ್ವೀಕಾರಕ್ಕೆ ನಿಗದಿಪಡಿಸಲಾದ ಅಂತಿಮ ಗಡುವನ್ನು ಜಾವ್ಡೇಕರ್ ಅವರು ಆಗಸ್ಟ್ 10ರ ಬದಲಿಗೆ ಜೂನ್ 30ಕ್ಕೆ ನಿಗದಿಪಡಿಸಿದ್ದರು. ಪರಿಸರ ಪರಿಣಾಮ ಮೌಲ್ಯಮಾಪನ ಕಾಯ್ದೆಯು, ಸದ್ಯ ಚಾಲ್ತಿಯಲ್ಲಿರುವ 2006 ಪರಿಸರ ಪರಿಣಾಮ ಕಾಯ್ದೆಯಲ್ಲಿ ಸುಧಾರಣೆಗಳನ್ನು ಮಾಡಲಿದೆ. ತಮ್ಮ ಚಟುವಟಿಕೆಗಳಿಂದಾಗಿ ಪರಿಸರ ಹಾಗೂ ಹವಾಮಾನದ ಮೇಲೆ ಆಗುವ ಪರಿಣಾಮವನ್ನು ಅಂದಾಜಿಸುವುದಕ್ಕಾಗಿ ಕೈಗಾರಿಕೆಗಳಿಗೆ ನಿಯಮಾವಳಿಗಳನ್ನು ನೂತನ ಕಾಯ್ದೆಯು ನಿಗದಿಪಡಿಸಲಿದೆ.
ಪರಿಸರ ಪರಿಣಾಮ ಮೌಲ್ಯಮಾಪನ ಕಾಯ್ದೆಯ ಬಗ್ಗೆ ಪರಿಸರ ಸಚಿವಾಲಯವು ಮಾರ್ಚ್ 23ರಂದು ಅಧಿಸೂಚನೆ ಹೊರಡಿಸಿತ್ತು. ಕಾಯ್ದೆಯ ಕುರಿತು 60 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಆದಾಗ್ಯೂ, ಕೊರೋನ ವೈರಸ್ ಹಾವಳಿಯ ನಿಯಂತ್ರಣಕ್ಕೆ ಲಾಕ್ಡೌನ್ ಹೇರಲಾದ್ದರಿಂದ ಅಂತಿಮ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿತ್ತು.
ನೂತನ ಕಾಯ್ದೆಗೆ ಸಂಬಂಧಿಸಿ ಸಚಿವಾಲಯವು ಈತನಕ ಸಾರ್ವಜನಿಕರಿಂದ 5 ಸಾವಿರಕ್ಕೂ ಅಧಿಕ ಅಭಿಪ್ರಾಯಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ ಹೆಚ್ಚಿನವು ನಕಾರಾತ್ಮಕವಾಗಿದ್ದವು. ಇದರ ಬೆನ್ನಲ್ಲೇ ಸಚಿವರು ತನ್ನ ನಿರ್ಧಾರಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡದೆಯೇ ಸಾರ್ವಜನಿಕ ಅಭಿಪ್ರಾಯ ಸ್ವೀಕಾರದ ಅವಧಿಯನ್ನು 40 ದಿನಗಳಿಗೂ ಕಡಿಮೆ ಅವಧಿಯನ್ನು ನೀಡಿದ್ದಾರೆ.
ಕಳೆದ ಒಂದು ವಾರದಿಂದ ನೂತನ ಕಾಯ್ದೆಯ ಬಗ್ಗೆ ಸಚಿವಾಲಯವು ಬಿರುಸಿನ ಚರ್ಚೆಯನ್ನು ನಡೆಸುತ್ತಿದೆ. ಸಚಿವಾಲಯದ ಮಾಜಿ ಕಾರ್ಯದರ್ಶಿ ಸಿ.ಕೆ.ಮಿಶ್ರಾ, ಹೆಚ್ಚುವರಿ ಕಾರ್ಯದರ್ಶಿ ರವಿ ಅಗ್ರಾವಾಲ್ ಹಗೂ ವಿಜ್ಞಾನಿಗಳಾದ ಡಾ.ಶರತ್ ಕುಮಾರ್ ಪಲ್ಲೇರಿಯಾ ಹಾಗೂ ಡಾ.ಜೆ.ಡಿ.ಮಾರ್ಕಸ್ ನೈಟ್ ಉಪಸ್ಥಿತರಿದ್ದರು.
ಕಾಯ್ದೆಯ ಕುರಿತು ಜನಾಭಿಪ್ರಾಯ ಸಂಗ್ರಹಣೆಯ ಕಾಲಮಿತಿಯನ್ನು ಕೇಂದ್ರ ಸರಕಾರ ವಿಸ್ತರಿಸದೆ ಇದ್ದಲ್ಲಿ ತಾನು ದಿಲ್ಲಿ ಹೈಕೋರ್ಟ್ ಮೆಟ್ಟಲೇರುವುದಾಗಿ, ಕಾಯ್ದೆಯ ಬಗ್ಗೆ ಆರ್ಟಿಐ ದಾಖಲೆಗಳನ್ನು ಪಡೆದಿರುವ ವಿಕ್ರಮ್ ತೊಂಗಾಡ್ ತಿಳಿಸಿದ್ದಾರೆ.
ಗಡುವನ್ನು ಯಾಕೆ ವಿಸ್ತರಿಸಿಲ್ಲವೆಂಬುದಕ್ಕೆ ಸಚಿವ ಜಾವ್ಡೇಕರ್ ಅವರು ಇನ್ನಷ್ಟೇ ಉತ್ತರಿಸಬೇಕಿದೆ.
ಸಾರ್ವಜನಿಕ ಅಹವಾಲು ಸಲ್ಲಿಕೆ ವಿಸ್ತರಣೆಗೆ ಪರಿಸರ ಸಚಿವಾಲಯ ಅಧಿಕಾರಿಗಳ ಸಲಹೆ
ಕಾಯ್ದೆಯ ಬಗ್ಗೆ ಸಾರ್ವಜನಿಕರ ಅಹವಾಲು ಸಲ್ಲಿಕೆಯ ಅವಧಿಯನ್ನು ವಿಸ್ತರಿಸಬೇಕೆಂದು ಪರಿಸರ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೀತಾ ಮೆನನ್ ಸಲಹೆ ನೀಡಿದ್ದರು. ಕಾಯ್ದೆಗೆ ಸಂಬಂಧಿಸಿ ಸಾರ್ವಜನಿಕರಿಂದ ವ್ಯಾಪಕವಾದ ಪ್ರತಿಕ್ರಿಯೆಗಳು ಬಂದಿರುವುದಾಗಿ ಅವರು ತಿಳಿಸಿದ್ದಾರೆ.
‘‘ಇಐಎ ಕಾಯ್ದೆಯಲ್ಲಿ ಮಾಡಲಾಗುವ ಯಾವುದೇ ಬದಲಾವಣೆಯು ದೇಶದಲ್ಲಿ ಪರಿಸರ ನಿರ್ವಹಣೆ ಮೇಲೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಡೆಯುವಿಕೆ ಹಾಗೂ ಬಳಕೆಯ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ 60 ದಿನಗಳ ಕಾಲಾವಧಿಯನ್ನು ನಿಗದಿಪಡಿಸುವುದನ್ನು ಮರುಪರಿಶೀಲಿಸಬೇಕೆಂಬ ಮನವಿಯಲ್ಲಿ ತಿರುಳಿದೆ’’ ಎಂದವರು ಹೇಳಿದ್ದಾರೆ.