ಬಿ.ಸಿ.ರೋಡ್ ಹೆದ್ದಾರಿ ಕಾಮಗಾರಿ: ವಾಹನ ಸಂಚಾರ ನಿಷೇಧ
ಪರ್ಯಾಯ ವ್ಯವಸ್ಥೆ

ಫೈಲ್ ಫೋಟೊ
ಮಂಗಳೂರು, ಜೂ. 26: ರಾಷ್ಟ್ರೀಯ ಹೆದ್ದಾರಿ 73ರ ಬಿ.ಸಿ.ರೋಡ್ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರಿಟೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಜೂ.26ರಿಂದ ಜು.18ರವರೆಗೆ ವಾಹನ ಸಂಚಾರ ನಿಷೇಧಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ರಾ.ಹೆ.73ರ ಬಿ.ಸಿರೋಡ್- ಕೊಟ್ಟಿಗೆಹಾರ ಭಾಗದ 20.150 ಕಿ.ಮೀ.ನಿಂದ 40 ಕಿ.ಮೀ. ವರೆಗೆ ಬಿ.ಸಿರೋಡಿನಿಂದ ಕೊಟ್ಟಿಗೆಹಾರ ಇಪಿಸಿ ಮಾದರಿಯಲ್ಲಿ ಮಧ್ಯಮ ಪಥ ರಸ್ತೆಯಿಂದ ಪೇವ್ಡ್ ಶೋಲ್ಡರ್ನೊಂದಿಗೆ ದ್ವಿಪಥ ರಸ್ತೆ ಹಾಗೂ ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಗೊಳಿಸಲಾಗುತ್ತಿದೆ. ಈ ಪ್ರಯುಕ್ತ ಬಂಟ್ವಾಳ ತಾಲೂಕು ಬಿ.ಸಿ.ರೋಡ್ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಪೂರ್ಣ ಗೊಳಿಸುವವರೆಗೆ ವಾಹನ ಸಂಚಾರ ನಿಷೇಧಗೊಳಿಸಲಾಗಿದೆ. ನಿಷೇಧಿತ ಅವಧಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಯ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರು, ಜೀಪು, ಟೆಂಪೊ, ವ್ಯಾನ್ ಎಲ್ಸಿವಿ (ಮಿನಿವ್ಯಾನ್), ದ್ವಿಚಕ್ರ ವಾಹನ ಹಾಗೂ ಆ್ಯಂಬುಲೆನ್ಸ್ ಮತ್ತು ದಿನನಿತ್ಯ ಸಂಚರಿಸಬಹುದಾದ ಸಾರ್ವಜನಿಕ ಬಸ್ಗಳು ಮಂಗಳೂರಿನಿಂದ ಪುಂಜಾಲಕಟ್ಟೆಯ ಕಡೆಗೆ ಮಂಗಳೂರು- ಬಿ.ಸಿ.ರೋಡ್- ಬಂಟ್ವಾಳಪೇಟೆ- ಜಕ್ರಿಬೆಟ್ಟು ಮಾರ್ಗವಾಗಿ ಹಾಗೂ ಪುಂಜಾಲಕಟ್ಟೆಯಿಂದ ಮಂಗಳೂರು ಕಡೆಗೆ ಜಕ್ರಿಬೆಟ್ಟು- ಬಂಟ್ವಾಳಪೇಟೆ- ಬಿ.ಸಿ.ರೋಡ್- ಮಂಗಳೂರು ಮಾರ್ಗ ಸಂಚರಿಸಬಹುದು.
ಮೂಡುಬಿದಿರೆಯಿಂದ ಬಂಟ್ವಾಳ- ಬಿ.ಸಿ.ರೋಡ್ ಕಡೆಗೆ ಮೂಡುಬಿದಿರೆ -ಬಂಟ್ವಾಳ ಜಂಕ್ಷನ್- ರಾ.ಹೆ. 234ರ ಮೂಲಕ ಜಕ್ರಿಬೆಟ್ಟು- ಬಂಟ್ವಾಳಪೇಟೆ- ಬಿ.ಸಿ.ರೋಡ್ ಮಾರ್ಗವಾಗಿ ಸಂಚರಿಸಬಹುದು. ಘನ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದೆ.
ಟ್ಯಾಂಕರ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚೇಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್ ಟ್ರೈಲರ್ಸ್, ರಾಜಹಂಸ ಮತ್ತು ಎಲ್ಲ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳು ಮಂಗಳೂರಿನಿಂದ ಗುರುವಾಯನಕೆರೆ ಕಡೆಗೆ ಮಂಗಳೂರು- ಬಿ.ಸಿ.ರೋಡ್- ಮಾಣಿ- ಉಪ್ಪಿನಂಗಡಿ (ಎಸ್.ಎಚ್-118) ಮುಖಾಂತರ ಕರಾಯ- ಕಲ್ಲೇರಿ- ಗುರುವಾಯನಕೆರೆ ಹಾಗೂ ಗುರುವಾಯನಕೆರೆ ಯಿಂದ ಮಂಗಳೂರಿನ ಕಡೆಗೆ ಗುರುವಾಯನಕೆರೆ (ಎಸ್.ಎಚ್-118) ಮುಖಾಂತರ ಕಲ್ಲೇರಿ- ಕರಾಯ- ಉಪ್ಪಿನಂಗಡಿ- ಮಾಣಿ- ಬಿ.ಸಿ.ರೋಡ್- ಮಂಗಳೂರು ಮಾರ್ಗವಾಗಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.







