ಸಹ್ಯಾದ್ರಿ ಪ್ರಾಧಿಕಾರ ಕ್ರಿಯಾಯೋಜನೆಗೆ 10 ಕೋಟಿ ಬಿಡುಗಡೆ
ಬೆಂಗಳೂರು, ಜೂ.26: ಪರಿಸರ, ಜಲಾಶಯಗಳು ದೇವಾಲಯ, ಪ್ರವಾಸಿ ತಾಣಗಳು ಸೇರಿದಂತೆ ಪಾರಂಪರಿಕ ಸ್ಥಳಗಳ ಸಂರಕ್ಷಿಸಿ ಪೋಷಿಸಲು ಸ್ಥಾಪನೆಯಾಗಿರುವ ಸಹ್ಯಾದ್ರಿ ಪಾರಂಪರಿಕ ಅಭಿವೃದ್ದಿ ಪ್ರಾಧಿಕಾರದ ಕ್ರಿಯಾಯೋಜನೆಗೆ ರೂ. 10 ಕೋಟಿ ಹಣವನ್ನು ಸರಕಾರ ಬಿಡುಗಡೆ ಮಾಡಿದೆ.
ಸುಮಾರು 10 ವರ್ಷಗಳ ನಂತರಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕ ಅರಗ ಜ್ಞಾನೇಂದ್ರ ಹಾಗೂ ಸಹ್ಯಾದ್ರಿ ಪಾರಂಪರಿಕ ಅಭಿವೃದ್ದಿ ಪ್ರಾಧಿಕಾರದ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.
ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳು, ಉದ್ಯಾನವನ, ಪ್ರವಾಸಿ ತಾಣ, ಜಲಾಶಯಗಳು, ಮ್ಯೂಸಿಯಂ, ವಿವಿಗಳು, ಸ್ಮಾರಕಗಳು ಸೇರಿದಂತೆ ಇತಿಹಾಸ ಪ್ರಸಿದ್ದ ಪಾರಂಪರಿಕ ಸ್ಥಳಗಳನ್ನು ಅಭಿವೃದ್ದಿಪಡಿಸಲು ಕ್ರಿಯಾಯೋಜನೆ ರೂಪಿಸಲಾಯಿತು.
ಪ್ರಾರಂಭಿಕ ಹಂತವಾಗಿ ಈ ಕ್ರಿಯಾಯೋಜನೆಗೆ ರೂ. 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮತಿ ಸೂಚಿಸಿದರು. ಕಳೆದ ಎರಡು ದಶಕಗಳಿಂದ ಪ್ರಾಧಿಕಾರಕ್ಕೆ ಸೂಕ್ತ ಆರ್ಥಿಕ ಸಹಾಯವಿಲ್ಲದೇ ಈ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿನ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು ಇದೀಗ ಪ್ರಾಧಿಕಾರ ಆರ್ಥಿಕ ಇತಿಮಿತಿಯೊಳಗೆ ಹಂತಹಂತವಾಗಿ ಕೆಲವು ಸ್ಥಳಗಳನ್ನು ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಹೊಸಹಳ್ಳಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ 25 ಲಕ್ಷ, ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರುಗ್ರಾಮ ಪಂಚಾಯತ್ ವ್ಯಾಪ್ತಿಯ ಶರವತಿ ನದಿ ಉಗಮಸ್ಥಾನ ಅಂಬುತೀರ್ಥದ ರಾಮೇಶ್ವರ ದೇವಾಲಯ ಸಮೀಪದಲ್ಲಿ ಸಭಾಭವನ ನಿರ್ಮಾಣ 181 ಲಕ್ಷ, ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿಯನ್ನು ದೆಹಲಿಯ ಅಕ್ಷರಧಾಮ ಮಾದರಿಯಂತೆ ಆಂಪಿಥೇಟರ್, ಬೆಳಕು ಮತ್ತು ಶಬ್ದ ಮಾದ್ಯಮ ಇತರೆ ಸೌಲಭ್ಯ 300 ಲಕ್ಷ, ಬೇಗೂರಿನಲ್ಲಿ ಬನ್ನಿಮಂಟಪ ನಿರ್ಮಾಣ 50 ಲಕ್ಷ, ಗಂಗಾ ಮೂಲದಲ್ಲಿ ಹುಟ್ಟುವ ತುಂಗಭದ್ರ ಮತ್ತು ನೇತ್ರಾವತಿ ನದಿ ಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ 25 ಲಕ್ಷ, ಮೂಡಗೆರೆ ತಾಲೂಕಿನ ದೇವರ ಮನೆ ಕಾಲಭೈರವೇಶ್ವರ ದೇವಸ್ಥಾನ ಹಾಗೂ ಪುಷ್ಕರಣಿಯ ಜೀವನೋದ್ದಾರಕ್ಕೆ ಲಕ್ಷ ನೀಡಲಾಗಿದೆ.
ಬಲ್ಲಾಳ ರಾಯನದುರ್ಗಕೋಟೆ ಸಂರಕ್ಷಣೆಗೆ 100 ಲಕ್ಷ, ಹಿರೇಮಗಳೂರು ಐತಿಹಾಸಿಕ ಕೋದಂಡರಾಮಸ್ವಾಮಿ ದೇವಸ್ಥಾನ ಮತ್ತು ಪುಷ್ಕರಣಿಯ ಸಮಗ್ರ ಅಭಿವೃದ್ದಿಗೆ 100 ಲಕ್ಷ, ಚಿಕ್ಕಮಗಳೂರು ತಾಲೂಕಿನ ಹೊಯ್ಸಳರ ಉಗಮ ಸ್ಥಾನ ಅಂಗಡಿಯಲ್ಲಿನ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಅಭಿವೃದ್ದಿಗೆ 50 ಲಕ್ಷ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮಲವಳ್ಳಿಯಲ್ಲಿರುವ ನೈಸರ್ಗಿಕ ಕಲ್ಲುಸಂಕವನ್ನು ಭೂ ವೈಜ್ಞಾನಿಕ ಸ್ಮಾರಕವಾಗಿ ಸಂರಕ್ಷಿಸಲು 25 ಲಕ್ಷ, ಹೈಗುಂದದ ಯಕ್ಷಮೂರ್ತಿಗೆ 25 ಲಕ್ಷ, ಅಂಕೋಲ ತಾಲೂಕಿನ ಬಬ್ರುವಾಡ ಹತ್ತಿರದ ಬುದ್ದನ ಮೂರ್ತಿ ಸಂರಕ್ಷಣೆ 25 ಲಕ್ಷ, ಶಿರಸಿ ತಾಲೂಕಿನ ಗುದ್ದಾಪುರ ಗ್ರಾಮದ ಬಂಗಾರೇಶ್ವರ ದೇವಸ್ಥಾನ ಅಭಿವೃದ್ದಿಗೆ 25 ಲಕ್ಷ, ಯಲ್ಲಾಪುರ ತಾಲೂಕು ವಜ್ರಹಳ್ಳಿ ಗ್ರಾಮದ ಹೊನ್ನಗದ್ದೆಯ ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ದಿಗೆ 25 ಲಕ್ಷ, ಮುಂಡಗೋಡಿನ ರಾಮಲಿಂಗೇಶ್ವರ ದೇವಸ್ಥಾನಕ್ಕೆ 25 ಲಕ್ಷ ಹಾಗೂ ಹಳಿಯಾಳ ತಾಲೂಕಿನ ಅರ್ಲವಾಡಿ ಗ್ರಾ.ಪಂ.ನ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ದಿಗೆ 25 ಲಕ್ಷ ನಿಗದಿಪಡಿಸಲಾಗಿದೆ.







