ಅನಿವಾಸಿ ಕನ್ನಡಿಗರನ್ನು ಹೊತ್ತು ದುಬೈಯಿಂದ ಮಂಗಳೂರಿಗೆ ಆಗಮಿಸಿದ ಕೆಎಸ್ ಸಿಸಿಯ ಎರಡನೇ ಬಾಡಿಗೆ ವಿಮಾನ

ಮಂಗಳೂರು : ಕರ್ನಾಟಕ ಸ್ಪೊರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ನ ಎರಡನೇ ಖಾಸಗಿ ಚಾರ್ಟೆಡ್ ವಿಮಾನವು ಅನಿವಾಸಿ ಕನ್ನಡಿಗರನ್ನು ಹೊತ್ತು ಶಾರ್ಜಾ ವಿಮಾನ ನಿಲ್ದಾಣದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗಿನ ಜಾವ 6 ಗಂಟೆಗೆ ತಲುಪಿದೆ.
ಯುಎಇ ಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ 'ಕೆಎಸ್ ಸಿಸಿ' ದುಬೈ ಕಮ್ಯೂನಿಟಿ ಡೆವಲಪ್ಮೆಂಟ್ ಅಥೋರಿಟಿಯಲ್ಲಿ ನೋಂದಾಯಿತ ಸಾಮಾಜಿಕ ಸಂಸ್ಥೆಯಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಅದರಂತೆ ದ್ವಿತೀಯ ವಿಮಾನವು 18 ಗರ್ಭಿಣಿಯರು, 3 ನವಜಾತ ಶಿಶುಗಳು, 9 ಮಕ್ಕಳು, 8 ಹಿರಿಯ ನಾಗರಿಕರು, 20 ತುರ್ತು ಚಿಕಿತ್ಸಾ ರೋಗಿಗಳೂ ಒಳಗೊಂಡಂತೆ ಸಂದರ್ಶನ ವಿಸಾದಲ್ಲಿ ಉಳಿದುಕೊಂಡವರೂ, ಉದ್ಯೊಗ ಕಳೆದುಕೊಂಡವರೂ, ತಾಯ್ನಾಡಿನಲ್ಲಿ ಮರಣ ಹೊಂದಿದ ವ್ಯಕ್ತಿಯ ರಕ್ತಸಂಬಂಧಿಕರೂ ಸೇರಿದಂತೆ 171 ಪ್ರಯಾಣಿಕರೊಂದಿಗೆ ಶಾರ್ಜಾ ದಿಂದ ಏರ್ ಅರೇಬಿಯಾ ವಿಮಾನದ ಮೂಲಕ ರಾತ್ರಿ 1 ಗಂಟೆಗೆ ಹೊರಟಿದ್ದು, ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದೆ.
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಮಾರ್ಗದರ್ಶನದೊಂದಿಗೆ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಕೆಎಸ್ ಸಿಸಿ ಯ ಹೆಲ್ಪ್ ಡೆಸ್ಕ್ ತಂಡವು ಕಾರ್ಯ ನಿರ್ವಹಿಸಿದ್ದು, ಕೆಎಸ್ ಸಿಸಿ ಅಧ್ಯಕ್ಷರಾದ ಮಹಮ್ಮದ್ ಇಸ್ಮಾಯಿಲ್ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು.
ಈ ಸಂದರ್ಭ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗಾಗಿ ಕೆಎಸ್ ಸಿಸಿ ಕ್ಲಬ್ ಪದಾಧಿಕಾರಿಗಳಾದ ಇಸ್ಮಾಯಿಲ್, ಜಾವೇದ್, ಸಫ್ವಾನ್ ಸೇರಿದಂತೆ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಅನಿವಾಸಿ ಕನ್ನಡಿಗರಿಗೆ ಚಾರ್ಟೆಡ್ ವಿಮಾನ ಸೌಲಭ್ಯವನ್ನು ಒದಗಿಸಲು ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಕಮಿಷನರ್, ಸಾಮಾಜಿಕ ಕಾರ್ಯಕರ್ತರಾದ ಉಮರ್ ಯು.ಎಚ್, ಅಥಾವುಲ್ಲಾ ಜೋಕಟ್ಟೆ ಅವರಿಗೂ ಕೆಎಸ್ ಸಿಸಿ ಕ್ಲಬ್ ನ ಪರವಾಗಿ ಕೃತಜ್ಞತೆ ಮತ್ತು ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.






.jpeg)
.jpeg)

.jpeg)


