ರಾಜ್ಯದಲ್ಲಿ ಕೊರೋನ ಅಟ್ಟಹಾಸ: ಒಂದೇ ದಿನ 918 ಮಂದಿಗೆ ಪಾಸಿಟಿವ್, 11 ಸೋಂಕಿತರು ಸಾವು
ಬೆಂಗಳೂರು ನಗರ ಜಿಲ್ಲೆಯಲ್ಲಿಂದು 596 ಪ್ರಕರಣಗಳು ದೃಢ

ಬೆಂಗಳೂರು, ಜೂ.27: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಇದುವರೆಗಿನ ಪ್ರತಿದಿನದ ಕೊರೋನ ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಮತ್ತೆ 918 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 11,923 ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮೂರು, ಬೀದರ್ ನಲ್ಲಿ ಮೂರು, ಕಲಬುರಗಿಯಲ್ಲಿ 2 ಹಾಗೂ ಧಾರವಾಡ, ಬಳ್ಳಾರಿ, ಗದಗದಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 191ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯ 83 ವರ್ಷದ ವೃದ್ಧ, 70 ವರ್ಷದ ವ್ಯಕ್ತಿ ಹಾಗೂ 74 ವರ್ಷದ ಮಹಿಳೆ, ಬೀದರ್ ಜಿಲ್ಲೆಯ 65 ವರ್ಷದ ಪುರುಷ, 73 ವರ್ಷದ ಮಹಿಳೆ ಹಾಗೂ 65 ವರ್ಷದ ಪುರುಷ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ 50 ಹಾಗೂ 72 ವರ್ಷದ ಇಬ್ಬರು ಮತ್ತು ಧಾರವಾಡ, ಬಳ್ಳಾರಿ, ಗದಗದಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 596, ದಕ್ಷಿಣ ಕನ್ನಡ 49, ಕಲಬುರಗಿ 33, ಗದಗ 24, ಬಳ್ಳಾರಿ 24, ಧಾರವಾಡ 19, ಬೀದರ್ 17, ಹಾಸನ 14, ಕೋಲಾರ 14, ಉಡುಪಿ 14, ಯಾದಗಿರಿ 13, ಶಿವಮೊಗ್ಗ 13, ತುಮಕೂರು 13, ಚಾಮರಾಜನಗರ 13, ಮೈಸೂರು 12, ಮಂಡ್ಯ 12, ಕೊಡಗು 9, ದಾವಣಗೆರೆ 6, ರಾಯಚೂರು 6, ಬೆಂಗಳೂರು ಗ್ರಾಮಾಂತರ 5, ಉತ್ತರ ಕನ್ನಡ 2, ಬಾಗಲಕೋಟೆ 2, ಚಿಕ್ಕಮಗಳೂರು 2, ಚಿತ್ರದುರ್ಗ 2, ಬೆಳಗಾವಿ, ಚಿಕ್ಕಬಳ್ಳಾಪುರ, ಕೊಪ್ಪಳ ಹಾಗೂ ಹಾವೇರಿಯಲ್ಲಿ ತಲಾ 1 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 11,923 ಕೊರೋನ ಸೋಂಕಿತರ ಪೈಕಿ 7,287 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 371 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 191 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 4,441 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.







