ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಸಿಪಿಎಂ ಪ್ರತಿಭಟನೆ

ಮಂಗಳೂರು, ಜೂ.27: ಪೆಟ್ರೋಲ್, ಡೀಸೆಲ್ ದರವನ್ನು ವಿಪರೀತವಾಗಿ ಏರಿಸಿ, ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಸಮೀಪ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಜನರಲ್ಲಿದ್ದ ಅತೃಪ್ತಿಯ ಲಾಭ ಪಡೆದು, ಅವರಲ್ಲಿನ ಭಾವನೆಗಳನ್ನು ಕೆರಳಿಸಿ, ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ನೇತೃತ್ವದ ಸರಕಾರವು ಸರ್ವಾಧಿಕಾರಿಯಾಗಿ ವರ್ತಿಸು ತ್ತಿದೆ. ಇದರಿಂದ ದೇಶದ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ತತ್ವಗಳಿಗೆ ಭಾರೀ ಅಪಾಯ ತಂದೊಡ್ಡಿದೆ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆಗಳು ಪಾತಾಳಕ್ಕೆ ಕುಸಿದಿದ್ದರೂ ದೇಶದಲ್ಲಿ ತೈಲ ಬೆಲೆಗಳು ಮಾತ್ರ ಒಂದೇ ಸಮನೆ ಏರುತ್ತಿದೆ. ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವುದರಿಂದ ಜನಸಾಮಾನ್ಯರ ಬದುಕಿಗೆ ನೇರವಾಗಿ ದುಷ್ಪರಿ ಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊರೋನ ಸಂಕಷ್ಟದ ಈ ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರ ರಕ್ತ ಹೀರುವ ಇಂತಹ ಸರಕಾರದ ವಿರುದ್ಧ ಜನತೆ ಹೆಚ್ಚೆಚ್ಚು ಸಂಘಟಿತರಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ಕುಮಾರ್ ಬಜಾಲ್ ಮಾತನಾಡಿ, ಸುಳ್ಳು ಹೇಳುವುದನ್ನೇ ತನ್ನ ಜಾಯಮಾನ ವನ್ನಾಗಿಸಿದ ಬಿಜೆಪಿ- ಸಂಘಪರಿವಾರ ನಡೆಸುತ್ತಿರುವ ದುಷ್ಕೃತ್ಯಗಳು ದೇಶವನ್ನು ಅಧೋಗತಿಗೆ ತಳ್ಳುತ್ತಿವೆ. ಮೋದಿ ಪ್ರಧಾನಿಯಾದರೆ ಕಪ್ಪು ಹಣ ತರುವುದಾಗಿ, 15 ಲಕ್ಷ ರೂ. ಜನರ ಖಾತೆಗೆ ಹಾಕುವುದಾಗಿ, ಬೆಲೆ ಏರಿಕೆ ತಗ್ಗಿಸುವುದಾಗಿ, ಪೆಟ್ರೋಲ್ ದರ 30 ರೂ.ಗೆ ಇಳಿಸುವುದಾಗಿ ಬಡಾಯಿ ಕೊಚ್ಚಿಕೊಂಡವರು. ಇಂದು ಪೆಟ್ರೋಲ್ ದರ ಆಕಾಶದೆತ್ತರಕ್ಕೆ ಏರುತ್ತಿದ್ದರೂ ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೊರೋನದಿಂದಾಗಿ ಇಡೀ ದೇಶವೇ ತತ್ತರಿಸಿದೆ. ಜನಸಾಮಾನ್ಯರ ಬದುಕು ಹೇಳತೀರದಾಗಿದೆ. ಅಂತಹುದರಲ್ಲಿ ಕೇಂದ್ರ ಸರಕಾರ ಜನರ ಪರವಾಗಿ ನಿಲ್ಲುವ ಬದಲು ಕಾರ್ಪೊರೇಟ್ ಕಂಪೆನಿಗಳ ಹಿತಕಾಯುತ್ತಿರುವುದು ಅಕ್ಷಮ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಯುವನಾಯಕ ಸಂತೋಷ್ ಬಜಾಲ್ ಮಾತನಾಡಿ, ಕಳೆದ 20 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಒಂದೇ ಸಮನೆ ಏರುತ್ತಿದ್ದರೂ ಆಡಳಿತ ನಡೆಸುವ ಬಿಜೆಪಿಯ ಸಂಸದರು, ಶಾಸಕರು ಬಾಯಿ ಬಿಡುತ್ತಿಲ್ಲ. ಅಂದು ಬೆಲೆ ಏರಿಕೆಯ ವಿರುದ್ಧ ಕಪಟ ನಾಟಕವಾಡಿದ್ದ ಬಿಜೆಪಿಗರು ಇಂದು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ನಾಯಕ ವಾಸುದೇವ ಉಚ್ಚಿಲ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ಸಿಪಿಎಂ ಮಂಗಳೂರು ನಗರ ಮುಖಂಡರಾದ ಸುರೇಶ್ ಬಜಾಲ್, ದಿನೇಶ್ ಶೆಟ್ಟಿ, ಸಿಐಟಿಯು ನಾಯಕರಾದ ಸ್ಟಾನ್ಲಿ ನೊರೋನ್ಹ, ಅನ್ಸರ್, ಸಂತೋಷ್ ಆರ್.ಎಸ್., ಹರೀಶ್ ಪೂಜಾರಿ, ದಲಿತ ಹಕ್ಕುಗಳ ಸಮಿತಿಯ ನಾಯಕ ರಾದ ಪ್ರಶಾಂತ್ ಉರ್ವಸ್ಟೋರ್, ರಘುವೀರ್, ಕೃಷ್ಣ ಮುಂತಾದವರು ಭಾಗವಹಿಸಿದ್ದರು.








