ಮೂರೂವರೆ ರೂಪಾಯಿ ಸಾಲಕ್ಕಾಗಿ ರೈತನನ್ನು 15 ಕಿ.ಮೀ. ನಡೆಸಿದ ಶಿವಮೊಗ್ಗ ಬ್ಯಾಂಕ್ ಸಿಬ್ಬಂದಿ !

ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಜೂ.27: ಕೊರೋನ ವೈರಸ್ನಿಂದಾಗಿ ಬಹುತೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, ಕೇವಲ ಮೂರೂವರೆ ರೂಪಾಯಿ ಸಾಲ ಹಿಂಪಡೆಯಲು ಬ್ಯಾಂಕ್ ಸಿಬ್ಬಂದಿ ರೈತನೊಬ್ಬನನ್ನು 15 ಕಿ.ಮೀ. ನಡೆಸಿದ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ನಡೆದಿದೆ.
ನಿಟ್ಟೂರು ಸಮೀಪದ ಬರುವೆಯ ರೈತ ಲಕ್ಷ್ಮೀ ನಾರಾಯಣ ಎಂಬವರು ನಿಟ್ಟೂರು ಕೆನರಾ ಬ್ಯಾಂಕ್ ನಲ್ಲಿ 35 ಸಾವಿರ ರೂಪಾಯಿ ಕೃಷಿ ಸಾಲ ಮಾಡಿದ್ದರು. ಸರಕಾರದ ಸಾಲ ಮನ್ನಾ ಯೋಜನೆ ಅಡಿಯಲ್ಲಿ 32 ಸಾವಿರ ರೂಪಾಯಿ ಮನ್ನಾ ಮಾಡಲಾಗಿತ್ತು. 3 ಸಾವಿರ ರೂಪಾಯಿಯನ್ನು ಅವರು ಇತ್ತೀಚೆಗೆ ಕಟ್ಟಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇತ್ತೀಚೆಗೆ ಅವರಿಗೆ ನಿಟ್ಟೂರು ಕೆನರಾ ಬ್ಯಾಂಕ್ನಿಂದ ಕರೆ ಬಂದಿತ್ತು. ಅಷ್ಟೇ ಅಲ್ಲ, ಅಲ್ಲಿ ಆಘಾತಕಾರಿ ವಿಚಾರವೊಂದನ್ನು ಬ್ಯಾಂಕ್ ಸಿಬ್ಬಂದಿ ಹೇಳಿದ್ದರು. ‘ನೀವು ಬ್ಯಾಂಕ್ಗೆ ಹಣ ಕಟ್ಟುವುದು ಬಾಕಿ ಇದೆ. ಹೀಗಾಗಿ ತಕ್ಷಣ ಶಾಖೆಗೆ ಬನ್ನಿ’ ಎಂದು. ಇದರಿಂದ ಆತಂಕಗೊಂಡ ಲಕ್ಷ್ಮೀನಾರಾಯಣ ಅವರು ಬ್ಯಾಂಕ್ಗೆ ಹೊರಟು ನಿಂತರು.
ಕೊರೋನ ವೈರಸ್ನಿಂದಾಗಿ ಈ ಭಾಗದಲ್ಲಿ ಬಸ್ ಸಂಚಾರ ವಿರಳವಾಗಿದೆ. ಅಲ್ಲದೆ, ಲಕ್ಷ್ಮೀನಾರಾಯಣ ಅವರ ಬಳಿ ಯಾವುದೇ ಸ್ವಂತ ವಾಹನವೂ ಇಲ್ಲ. ಹೀಗಾಗಿ, ದಿಕ್ಕು ತೋಚದೆ ಅವರು ಬರೋಬ್ಬರಿ 15 ಕಿ.ಮೀ. ದೂರದ ಬ್ಯಾಂಕ್ಗೆ ನಡೆದೇ ಸಾಗಿದ್ದರು. ಬ್ಯಾಂಕ್ ತಲುಪಿ ಸಿಬ್ಬಂದಿ ಬಳಿ ವಿಚಾರಿಸಿದಾಗ ಬಾಕಿ ಉಳಿದುಕೊಂಡಿರುವುದು ಕೇವಲ 3.40 ರೂಪಾಯಿ ಎಂಬುದು ಗೊತ್ತಾಗಿದೆ. ಈ ಹಣವನ್ನು ಪಾವತಿಸಿ ಅವರು ಮನೆಗೆ ಮರಳಿದ್ದಾರೆ. ಸದ್ಯ, ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ ಮೂರೂವರೆ ರೂಪಾಯಿಗೆ ರೈತನನ್ನು 15 ಕಿ.ಮೀ. ನಡೆಸಿದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.







