ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಹೋರಾಟ ನಡೆಸಿ: ಪ್ರೊ.ರವಿವರ್ಮಕುಮಾರ್ ಕರೆ

ಪಾಂಡವಪುರ, ಜೂ.27: ಹಸಿರು ಶಾಲುಗಳು ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ನಡೆಸಿದರೆ ಮಾತ್ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಡೆಯಲು ಸಾಧ್ಯ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಕರೆ ನೀಡಿದ್ದಾರೆ.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ರೈತಸಂಘದ ಪೂರ್ಣ ಜಿಲ್ಲಾ ಸಮಿತಿ ಸಮಾವೇಶ, ನೂತನ ಜಿಲ್ಲಾ ಸಮಿತಿಯ ಪದಗ್ರಹಣ ಹಾಗೂ ರೈತ ವಿರೋಧಿ ತಿದ್ದುಪಡಿ ಕಾನೂನುಗಳಿಂದಾಗುವ ಪರಿಣಾಮಗಳ ಕುರಿತು ಮೈಸೂರು ವಿಭಾಗ ಮಟ್ಟದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳು-ಭೂ ಸಂಬಂಧಗಳ ಮೇಲಾಗುವ ಪರಿಣಾಮಗಳ ಕುರಿತು ಅವರು ವಿಚಾರ ಮಂಡನೆ ಮಾಡಿದರು.
ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಹೋರಾಟ ನಡೆಸಿದರೆ ಅಂತಹವರನ್ನು ದೇಶದ್ರೋಹಿ ಕಾನೂನಿನ ಅಡಿಯಲ್ಲಿ ಜೈಲಿಗಟ್ಟಲಾಗುತ್ತಿದ್ದು, ರೈತರು ಇಂದಿನಿಂದಲೇ ತಮ್ಮ ತಮ್ಮ ಕ್ಷೇತ್ರದ ಶಾಸಕರ ಮನೆಮುಂದೆ ಧರಣಿ ನಡೆಸಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಹಠ ಹಿಡಿದು ಪ್ರತಿಭಟನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ತಾವು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಭೂ ಸುಧಾರಣಾ ಕಾಯ್ದೆ ತರುವ ಮೂಲಕ ಯಾವತ್ತೂ ನೇಗಿಲು ಹಿಡಿಯದೆ ನೂರಾರು ಎಕರೆ ಭೂ ಒಡೆತನ ಹೊಂದಿದ್ದ ಭೂ ಮಾಲಕರರಿಂದ ಭೂಮಿಯನ್ನು ಕಿತ್ತುಕೊಂಡು ಉಳುವವನನ್ನು ಭೂಮಿಯ ಒಡೆಯನನ್ನಾಗಿ ಮಾಡಿದರು. ಇದರಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ಭೂ ರಹಿತರಿಗೆ ಭೂಮಿಯ ಒಡೆತನ ಸಿಕ್ಕಿತು. ಆದರೆ, ಇಂದಿನ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅದೇ ರೈತರಿಗೆ ಹಣದ ಆಮಿಷ ಒಡ್ಡಿ ಭೂಮಿಯನ್ನು ಕಿತ್ತುಕೊಳ್ಳುತ್ತಿದೆ. ಇದರಿಂದ ಮುಂದೊಂದು ದಿನ ಭೂಮಿಯ ಒಡೆಯ ಅದರಲ್ಲಿ ಕೂಲಿಯಾಳಾಗಿ ದುಡಿಯುವ ಸಂದರ್ಭ ಬರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ-ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆ ಮೇಲಾಗುವ ಪರಿಣಾಮಗಳು ವಿಷಯ ಕುರಿತು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ಕರ್ನಾಟಕ ರಾಜ್ಯದ ರೈತರು ಇಂದು ಕೊರೋನ ಭಯದ ಜತೆ ತಮ್ಮ ಭೂಮಿಯನ್ನು ಕಿತ್ತುಕೊಳ್ಳಲು ಹವಣಿಸುತ್ತಿರುವ ಸರಕಾರದ ನಿರ್ಧಾರದ ಭಯದಿಂದಲೂ ತತ್ತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಭಾಷಣಗಳು ಉಪಯೋಗಕ್ಕೆ ಬರುವುದಿಲ್ಲ. ನಾವು ಈಗ ಯುದ್ಧ ಭೂಮಿಯಲ್ಲಿದ್ದೇವೆ. ರೈತರ ಹಿತರಕ್ಷಣೆಗೆ ಮುಳ್ಳಾಗಿರುವ ಸರಕಾರವೇ ನಮ್ಮ ವಿರೋಧಿಯಾಗಿದ್ದು, ಸರಕಾರದ ವಿರುದ್ಧ ರಣತಂತ್ರವನ್ನು ರೂಪಿಸಿ ನಾವು ಗೆಲ್ಲಬೇಕು ಎಂದರು.
ವಿದ್ಯುತ್ ಕಾಯ್ದೆ ತಿದ್ದುಪಡಿಗಳು ಮತ್ತು ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗಳು ವಿಷಯ ಕುರಿತು ಪ್ರಗತಿಪರ ಚಿಂತಕ ಮತ್ತು ವಾರ್ತಾಭಾರತಿ ಅಂಕಣಕಾರ ಶಿವಸುಂದರ್ ಮಾತನಾಡಿ, ಸರಕಾರ ಅಗತ್ಯ ವಸ್ತುಗಳ ಕಾಯ್ದೆ ಪಟ್ಟಿಯಲ್ಲಿ ಅಗತ್ಯ ವಸ್ತುಗಳನ್ನೆ ಕೈ ಬಿಟ್ಟಿದೆ. ಕೆಲವೊಂದು ಅಗತ್ಯ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುವ ಅಧಿಕಾರವನ್ನು ಮಾರಾಟಗಾರರು ಹೊಂದಿದ್ದಾರೆ. ಜತೆಗೆ ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವ್ಯಕ್ತಿಗಳು ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ ಕಾರಣ ವಿದ್ಯುತ್ ಬೆಲೆ ನಿಗದಿಪಡಿಸುವ ನಿಯಂತ್ರಣವನ್ನು ಸರಕಾರ ಕಳೆದುಕೊಂಡಿದೆ. ಬಡವರಿಗೆ ನೀಡುತ್ತಿದ್ದ ಸಬ್ಸಿಡಿಗಳು ದೊರೆಯದ ಕಾರಣ ಇಂದನ ಬೆಲೆಗಳು ಹೆಚ್ಚಳವಾಗಿದೆ ಇದಕ್ಕೆ ಸರಕಾರದ ಬಡವರ ವಿರುದ್ಧದ ನೀತಿಗಳು ಕಾರಣ ಎಂದು ಆರೋಪಿಸಿದರು.
ಇದೇ ವೇಳೆ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ 'ಈಗ ಭಾರತ ಮಾತನಾಡುತ್ತಿದೆ’ ಪುಸ್ತಕದ 2ನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.
ವಿಚಾರ ಸಂಕಿರಣಕ್ಕೂ ಮುನ್ನ ನೂರಾರು ರೈತರು ಕ್ಯಾತನಹಳ್ಳಿ ಗ್ರಾಮದಲ್ಲಿರುವ ಮಾಜಿ ಶಾಸಕ, ರೈತ ಹೋರಾಟಗಾರ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಪಾದಯಾತ್ರೆ ಮೂಲಕ ಕ್ಯಾತನಹಳ್ಳಿ ಗ್ರಾಮ ಪಂಚಾಯತ್ ಕಚೇರಿ ಮುಂದೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಹಿರಿಯ ರೈತ ಮುಖಂಡರಾದ ಚಾಮರಸ ಮಾಲಿ ಪಾಟೀಲ್, ಟಿ.ಸುಲೇನೂರು ಎಂ.ಶಂಕರಪ್ಪ, ಜೆ.ಎಂ.ವೀರಸಂಗಯ್ಯ, ಎ.ಎಲ್.ಕೆಂಪೂಗೌಡ, ಎನ್.ಕೆ.ಜಯರಾಂ, ಶಂಭೂನಹಳ್ಳಿ ಸುರೇಶ್, ಸುನೀತಾ ಪುಟ್ಟಣ್ಣಯ್ಯ ಮುಂತಾದವರು ಉಪಸ್ಥಿತರಿದ್ದರು.







