ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿದ ದಿಲ್ಲಿ ಪೊಲೀಸ್ ಕಾನ್ಸ್ಟೇಬಲ್
![ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿದ ದಿಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿದ ದಿಲ್ಲಿ ಪೊಲೀಸ್ ಕಾನ್ಸ್ಟೇಬಲ್](https://www.varthabharati.in/sites/default/files/images/articles/2020/06/28/249008-1593334216.jpg)
ಹೊಸದಿಲ್ಲಿ, ಜೂ.28: ದಿಲ್ಲಿ ಪೊಲೀಸ್ ಕಾನ್ಸ್ಟೇಬಲ್ ತನ್ನ ಸಹೋದ್ಯೋಗಿಯೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದಲ್ಲದೆ ಬಳಿಕ ಆತನ ಮೇಲೆಯೇ ಗುಂಡು ಹಾರಿಸಿದ ಘಟನೆ ಈಶಾನ್ಯ ದಿಲ್ಲಿಯ ಸೀಮಾಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ಸ್ಟೇಬಲ್ ಅಮೋದ್ ಭದಾನ ತನ್ನ ಕರ್ತವ್ಯ ಮುಗಿಸಿ ಪೊಲೀಸ್ ಸ್ಟೇಶನ್ಗೆ ವಾಪಸಾದ ಬಳಿಕ ಈ ಘಟನೆಯು ಶುಕ್ರವಾರ ರಾತ್ರಿ ನಡೆದಿದೆ. ಅಮೋದ್ ರಾತ್ರಿ 10:30ಕ್ಕೆ ಊಟ ಮಾಡುತ್ತಿದ್ದಾಗ ಇನ್ನೋರ್ವ ಕಾನ್ಸ್ಟೇಬಲ್ ರವಿಂದರ್ ನಗರ್ ಯಾವುದೋ ವಿಷಯಕ್ಕೆ ಮಾತಿನ ಚಕಮಕಿ ನಡೆಸಿದ. ಬಳಿಕ ತನ್ನ ಪಿಸ್ತೂಲ್ ಹೊರ ತೆಗೆದು ಅಮೋದ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಶರ್ಮಾ ಹೇಳಿದ್ದಾರೆ.
ಬುಲೆಟ್ ಅಮೋದ್ನ ಎದೆಗೆ ತಗಲಿ,ನೆಲಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ವಾಮಿ ದಯಾನಂದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅಲ್ಲಿಂದ ಅವರನ್ನು ಏಮ್ಸ್ ಟ್ರೌಮಾ ಸೆಂಟರ್ಗೆ ಸಾಗಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡು ಹಾರಿಸಿದ ರವಿಂದರ್ನನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 307(ಕೊಲೆಯತ್ನ)ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.