ಮೆಡಿಸಿನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ : ಡಾ.ಮುಬಾರಕುನ್ನಿಸಾಗೆ ಬಂಗಾರದ ಪದಕ
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊರ್ವಳು ವೈದ್ಯಕೀಯ ವಿಜ್ಞಾನದಲ್ಲಿ ಅದ್ಬುತ ಸಾಧನೆ ಮಾಡಿದ್ದು, ಮೆಡಿಕಲ್ ಒಂಕಾಲೊಜಿಯಲ್ಲಿ ಪ್ರಥಮ ರ್ಯಾಂಕ್ ಗಳಿಸುವುದರೊಂದಿಗೆ ಬಂಗಾರ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಶಿರಸಿ ನಗರದ ಇಂದಿರಾ ನಗರದ ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಎಂ. ತೋನ್ಸೆ ಹಾಗೂ ಖತೀಜಾ ಗೊಲ್ಸನ್ ತೊನ್ಸೆ ದಂಪತಿಯ ಪುತ್ರಿ ಡಾ.ಮುಬಾರಕುನ್ನಿಸಾ ಎಂ. ಅಬ್ಬಾಸ್ ತೋನ್ಸೆ ಟ್ಯೂಮರ್ ಮತ್ತು ಕ್ಯಾನ್ಸರ್ ವಿಭಾಗದ ಮೆಡಿಸಿನ್ ಕ್ಷೇತ್ರದಲ್ಲಿ ಸುಪರ್ ಸ್ಪೆಷಿಯಾಲಿಟಿ ಡಾಕ್ಟರೇಟ್ (ಡಿಎಂ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿ ಬಂಗಾರದ ಪದಕ ಪಡೆದಿದ್ದಾರೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಶಿರಸಿ ಇಂದಿರಾ ನಗರದ ಸರಕಾರಿ ಕನ್ನಡ ಶಾಲೆಯಲ್ಲಿ ಪೂರ್ಣಗೊಳಿಸಿ ಎಂಇಎಸ್. ಆರ್ಟಸ್ ಆ್ಯಂಡ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಮುಬಾರಕುನ್ನಿಸಾ ದಾವಣಗೆರೆಯ ಬಾಪೂಜಿ ಮೆಡಿಕಲ್ ಕಾಲೇಜಿ ನಲ್ಲಿ ಎಂಬಿಬಿಎಸ್ ಪದವಿ ಪಡೆದು ಕೊಂಡಿದ್ದರು. ಮಣಿಪಾಲದ ಕಸ್ತೂರಭಾ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪದವಿ ಪೂರೈಸಿ, ಬೆಂಗಳೂರಿನ ಹೆಸರಾಂತ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಅಧ್ಯಾಯನ ಮಾಡಿ ರಾಜೀವ್ ಗಾಂಧಿ ಯುನಿರ್ವಸಿಟಿಯಿಂದ ನಡೆದ ಪೋಸ್ಟ್ ಡಾಕ್ಟರೇಟ್ ಪದವಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಮುಬಾರಕುನ್ನಿಸಾರ ಸಾಧನೆಗೆ ನಾರ್ಥ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಮ್ ಅಧ್ಯಕ್ಷ ಇಮ್ತಿಯಾಝ್ ಉಮರ್ ಶೇಖ್ ಮತ್ತು ಪದಾಧಿಕಾರಿಗಳು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.