ಸುಳ್ಯ ಎಸ್ಸೆಸ್ಸೆಫ್ ಡಿವಿಷನ್ ಕ್ಯೂ ಟೀಂ ವತಿಯಿಂದ ಸರಕಾರಿ ಆಸ್ಪತ್ರೆ ಆವರಣ ಸ್ವಚ್ಛತೆ
ಸುಳ್ಯ, ಜೂ.28: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್) ಸುಳ್ಯ ಡಿವಿಷನ್ ಕ್ಯೂ ಟೀಂ ವತಿಯಿಂದ ಸುಳ್ಯ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲ ಪರಿಸರವನ್ನು ಇಂದು ಸ್ವಚ್ಛಗೊಳಿಸಲಾಯಿತು.
ಸಾರ್ವಜನಿಕ ತಾಲೂಕು ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ಸ್ವಚ್ಛತಾ ಕಾರ್ಯಕ್ಕೆ ಬೆಳಗ್ಗೆ 9ಗಂಟೆಗೆ ಚಾಲನೆ ನೀಡಿದರು. ಬಳಿಕ ಎಸ್ವೈಎಸ್ ಹಾಗೂ ಎಸ್ಸೆಸ್ಸೆಫ್ ಇದರ ಕಾರ್ಯವೈಖರಿಯನ್ನು ಅಭಿನಂದಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಎಸ್ವೈಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರು ಪಾಲ್ಗೊಂಡು ತಾಲೂಕು ಆಸ್ಪತ್ರೆಯ ಶವಗಾರದ ಪರಿಸರದಲ್ಲಿ ಶೇಖರಣೆಗೊಂಡಿದ್ದ ಕಸ ತ್ಯಾಜ್ಯಗಳನ್ನು ಜೆಸಿಬಿ ಯಂತ್ರದ ಮೂಲಕ ಅಲ್ಲಿಂದ ತೆಗೆಸಿ ಶುಚಿಗೊಳಿಸಲಾಯಿತು. ಆಸ್ಪತ್ರೆಯ ಮುಂಭಾಗದ ಮೂಲಕ ಶವಗಾರಕ್ಕೆ ತೆರಳುವ ದಾರಿ ಮತ್ತು ಆಸ್ಪತ್ರೆಯ ಸುತ್ತಮುತ್ತಲೂ ಬೆಳೆದಿದ್ದ ಕಾಡು, ಪೊದೆಗಳನ್ನು ಕಟಾವು ಯಂತ್ರದ ಮೂಲಕ ತೆರವುಗೊಳಿಸಿ ಶುಚೀಕರಣ ಮಾಡಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಜಿ.ಕೆ. ಇಬ್ರಾಹೀಂ ಅಮ್ಜದಿ, ದ.ಕ. ಈಸ್ಟ್ ಝೋನ್ ಬ್ಲಡ್ ಸೈಬೋ ಉಸ್ತುವಾರಿ ಸಿದ್ದೀಕ್ ಗೂನಡ್ಕ, ಎಸ್ವೈಎಸ್ ನಾಯಕರಾದ ಅಶ್ರಫ್ ಸಖಾಫಿ ಕುಂಬಕ್ಕೋಡು, ಹಸೈನಾರ್ ಗುತ್ತಿಗಾರು, ಸಂಶುದ್ದೀನ್ ಪಳ್ಳಿಮಜಲು ಮುಂತಾದವರ ನೇತೃತ್ವದಲ್ಲಿ ಸುಮಾರು ಮೂವತ್ತರಷ್ಟು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುಳ್ಯ ನಗರ ಪಂಚಾಯತ್ ಸದಸ್ಯ ಉಮರ್ ಕೆ.ಎಸ್. ರವರು ಪಾಲ್ಗೊಂಡು ಕಾರ್ಯಕರ್ತರಿಗೆ ಮಾರ್ಗದರ್ಶನಗಳನ್ನು ನೀಡಿ ಸಹಕರಿಸಿದರು.
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹುದ್ದೀನ್ ಹಿಮಮಿ, ಕೆಸಿಎಫ್ ಅಬುಧಾಬಿ ಪಬ್ಲೀಕೇಶನ್ ಕನ್ವಿನರ್ ಕಬೀರ್ ಜಟ್ಟಿಪಳ್ಳ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.