ಮಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ
ಮಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಸೋಮವಾರ ನಗರದ ಅಂಬೇಡ್ಕರ್ ವೃತ್ತದಿಂದ ಕುದ್ಮುಲ್ ರಂಗರಾವ್ ಪುರಭವನದವರೆಗೆ ಸೈಕಲ್ ಚಳವಳಿ ನಡೆಸಿತು.
ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್, ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂಧನ ಬೆಲೆ ಗಗನಕ್ಕೇರಿದೆ. ಕಚ್ಚಾ ತೈಲದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದರೂ ಪ್ರಪಂಚದ ಯಾವುದೇ ದೇಶದಲ್ಲಿ ಇರದಷ್ಟು ಬೆಲೆ ಏರುತ್ತಲೇ ಇದೆ ಎಂದರು.
ಯುಪಿಎ ಸರಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 140 ಡಾಲರ್ ಇದ್ದ ಸಂದರ್ಭದಲ್ಲಿಯೂ ಸರಕಾರ 60ರೂ.ಗೆ ಪೆಟ್ರೋಲ್ ನೀಡಿತ್ತು. ಇವತ್ತು ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 30-35ರ ಆಸುಪಾಸಿನಲ್ಲಿದ್ದರೂ ಪೆಟ್ರೋಲ್ 82 ರೂ.ಗೆ ಏರಿದೆ. ಇದು ಕೇಂದ್ರ ಸರಕಾರ ಹಗಲು ದರೋಡೆ ಮಾಡಿದಂತಿದೆ ಎಂದರು.
ಒಂದು ಕಡೆ ನೋಟ್ ಬ್ಯಾನ್, ಜಿಎಸ್ ಟಿ. ಕೊರೋನ, ಲಾಕ್ ಡೌನ್ ಗಳಿಂದ ಜನ ಜೀವನ ತತ್ತರಿಸಿ ಹೋಗಿದ್ದು, ಬೆಲೆ ಏರಿಕೆ ಮತ್ತಷ್ಟು ಬಡಜನರ ಮೇಲೆ ಪರಿಣಾಮ ಬೀರಿದೆ. ಸರಕಾರ ವೈಫಲ್ಯತೆಗಳಿಂದಾಗಿ ವಾಣಿಜ್ಯ ನೀತಿ, ವಿದೇಶಿ ನೀತಿಯ ತಪ್ಪು ನಿರ್ವಾಹಣೆಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಸಂಪೂರ್ಣ ವೈಫಲ್ಯವಾಗಿದ್ದು. ಶೀಘ್ರವೇ ತೈಲ ಬೆಲೆ ಹತೋಟಿಗೆ ತರಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತದೆ. ಕೋವಿಡ್ 19ನಿಂದ ಜನ ಜೀವನ ಈಗಾಗಲೇ ತತ್ತರಿಸಿ ಹೋಗಿದ್ದು, ಪ್ರಧಾನಿ ಮತ್ತು ಶಿಷ್ಯರು ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹುಟ್ಟಿದಂತಹ ಪಕ್ಷ. ಇದಕ್ಕೆ 135 ವರ್ಷಗಳ ಇತಿಹಾಸ ಇದೆ. ಕಾಂಗ್ರೆಸ್ ಪಕ್ಷ ಗಾಂಧಿ ತತ್ವದಲ್ಲಿ ನಂಬಿಕೆ ಇಟ್ಟು ಸತ್ಯಾಗ್ರಹ ಮಾಡುತ್ತಿದೆ. ಆದರೆ, ಬಿಜೆಪಿ ಗೋಡ್ಸೆ ವಾದವನ್ನು ಮುಂದಿಟ್ಟುಕೊಂಡು ಸರಕಾರ ನಡೆಸುತ್ತಿದೆ ಎಂದವರು, ದಯವಿಟ್ಟು ಕಾಂಗ್ರೆಸ್ ಮುಕ್ತ ಮಾಡುವ ಮಾತನ್ನು ಬದಿಗಿರಿಸಿ ಕರೋನ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನಿ ಮೋದಿ ಅವರು ಶ್ರಮಿಸಬೇಕೆಂದು ವಿನಂತಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ. ಸಲೀಂ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್, ಕಾರ್ಪೋರೇಟರ್ ಗಳಾದ ಶಶಿಧರ್ ಹೆಗಡೆ, ನವೀನ್ ಡಿ ಸೋಜಾ, ಸಂಶುದ್ದೀನ್ ಕುದ್ರೋಳಿ, ಅನಿಲ್ ಕುಮಾರ್ , ಎ.ಸಿ.ವಿನಯರಾಜ್, ಪ್ರಕಾಶ್ ಸಾಲಿಯಾನ್, ಪ್ರವೀಣ್ ಚಂದ್ರ ಆಳ್ವಾ, ಭಾಸ್ಕರ್ ಕೆ., ಸುಹೈಲ್ ಕಂದಕ್, ರಮನಂದ ಪೂಜಾರಿ, ಡಿ.ಕೆ.ಅಶೋಕ್ , ನೀರಜ್ ಪಾಲ್ , ಶಂಶುದ್ದೀನ್ ಬಂದರ್, ಚೇತನ್ ಕುಮಾರ್ , ಲಿಯಾಖತ್ ಶಾ, ಕಾರ್ಮಿಕ ಘಟಕದ ಅಧ್ಯಕ್ಷ ವಹಾಬ್, ಪದ್ಮನಾಭ್ ಅಮೀನ್, ನಝೀರ್ ಬಜಾಲ್, ಪ್ರೇಮ್ ಬಳ್ಳಾಲ್ ಭಾಗ್, ದಿನೇಶ್ ರಾವ್, ಸುರೇಶ್ ಶೆಟ್ಟಿ, ಜೆ. ನಾಗೇಂದ್ರ, ಗಿರೀಶ್ ಶೆಟ್ಟಿ, ಯೂಸುಫ್, ಇಮ್ರಾನ್ ಎ.ಆರ್, ಯಶವಂತ್ ಪ್ರಭು, ಯೋಗಿಶ್ ನಾಯಕ್, ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಶಾಂತಲಾ ಗಟ್ಟಿ , ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ನಮಿತಾ ಡಿ. ರಾವ್ , ಮಾಜಿ ಮೇಯರ್ ಹಾಗೂ ಕಾರ್ಪೋರೇಟರ್ ಜೆಸಿಂತಾ ಆಲ್ಫ್ರೆಡ್, ಮಾಜಿ ಕಾರ್ಪೋರೇಟರ್ ಗಳಾದ ರತಿಕಲಾ, ಕವಿತಾ ವಾಸು, ವಿಕ್ಟೋರಿಯಾ, ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಸದಸ್ಯರು, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.