ಹುರಿಯತ್ ಕಾನ್ಫರೆನ್ಸ್ ಗೆ ರಾಜೀನಾಮೆ ನೀಡಿದ ಪ್ರಮುಖ ಪ್ರತ್ಯೇಕತಾವಾದಿ ನಾಯಕ ಗೀಲಾನಿ

ಜಮ್ಮು: ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಕಾಶ್ಮೀರದ ಪ್ರಮುಖ ಪ್ರತ್ಯೇಕತಾವಾದಿ ನಾಯಕ ಎಂದು ಗುರುತಿಸಲ್ಪಟ್ಟಿರುವ ಸೈಯದ್ ಅಲಿ ಶಾಹ್ ಗೀಲಾನಿ ಹುರಿಯತ್ ಕಾನ್ಫರೆನ್ಸ್ ಗೆ ರಾಜೀನಾಮೆ ನೀಡಿದ್ದಾರೆ.
ಸಂಘಟನೆಯಲ್ಲಿನ ಕೆಲ ಪ್ರಸಕ್ತ ಸನ್ನಿವೇಶಗಳಿಂದಾಗಿ ತಾವು ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ಗೆ ರಾಜೀನಾಮೆ ನೀಡುತ್ತಿರುವುದಾಗಿ ಆಡಿಯೋ ಸಂದೇಶವೊಂದರಲ್ಲಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಸರಕಾರ ಕೈಬಿಟ್ಟ ನಂತರ ಇದೀಗ ಗೀಲಾನಿ ಅವರ ರಾಜೀನಾಮೆ ಒಂದು ಪ್ರಮುಖ ರಾಜಕೀಯ ಬೆಳವಣಿಗೆಯಾಗಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಕೈಬಿಟ್ಟ ಕ್ರಮದ ಕುರಿತಂತೆ ಪ್ರತಿಕ್ರಿಯಿಸಲು ಗೀಲಾನಿ ವಿಫಲರಾಗಿದ್ದಾರೆಂದು ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಹಲವರು ಅವರ ಮೌನವನ್ನೂ ಪ್ರಶ್ನಿಸಿದ್ದರು.
ಸೋಪೋರ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅನಾರೋಗ್ಯ ಅವರನ್ನು ಕಾಡುತ್ತಿದೆ ಎಂದು ಕೆಲ ಇತ್ತೀಚಿಗಿನ ವರದಿಗಳು ಹೇಳಿದ್ದವು.





