ಪತ್ರಕರ್ತ ಅನ್ಸಾರ್ ಇನೋಳಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ
ಮಂಗಳೂರು, ಜೂ.29: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ‘ಮಾನವೀಯ ಮೌಲ್ಯ ಮತ್ತು ಸೌಹಾರ್ದತೆ’ಯನ್ನು ಬಿಂಬಿಸುವ ವರದಿಗೆ ಪತ್ರಕರ್ತರಿಗೆ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯ ವರದಿಗಾರ ಮುಹಮ್ಮದ್ ಅನ್ಸಾರ್ ಇನೋಳಿ ಆಯ್ಕೆಯಾಗಿದ್ದಾರೆ.
ವಿಜಯವಾಣಿಯಲ್ಲಿ 2019ರ ಮೇ 21ರಂದು ಪ್ರಕಟಗೊಂಡ ‘ಸಂಬಂಧ ಗಟ್ಟಿಗೊಳಿಸಿದ ರಮಝಾನ್’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು 5,001 ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಹಿರಿಯ ಪತ್ರಕರ್ತರಾದ ಸುರೇಂದ್ರ ಶೆಟ್ಟಿ, ರವಿಪ್ರಸಾದ್ ಕಮಿಲ ಮತ್ತು ಉಪನ್ಯಾಸಕಿ ಸ್ಮಿತಾ ಶೆಣೈ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ಈ ಆಯ್ಕೆ ನಡೆಸಿದೆ.
ಜು.1ರಂದು ಪತ್ರಿಕಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story