ಕಲ್ಯಾಣಪುರ: ನೈಸರ್ಗಿಕ ಸಂಪನ್ಮೂಲದ ಸಮರ್ಪಕ ಬಳಕೆಗೆ ಬಿಷಪ್ ಕರೆ
ಕಲ್ಯಾಣಪುರ, ಜೂ.29: ನೈಸರ್ಗಿಕ ಸಂಪನ್ಮೂಲದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ಸೌರಶಕ್ತಿಯ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲದ ಸಮರ್ಪಕ ಬಳಕೆ, ಆರ್ಥಿಕ ಲಾಭ ಮತ್ತು ಪರಿಸರ ಸಂರಕ್ಷಣೆ ಈ ಮೂರು ಉದ್ದೇಶಗಳನ್ನು ಸಾಧಿಸಬಹುದು ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರೂ, ಕ್ಯಾಥೋಲಿಕ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು ಆಗಿರುವ ಅ.ವಂ.ಡಾ. ಜೆರಾಲ್ಡ್ ಐಸಾಕ್ ಲೋಬೋ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸೌರಶಕ್ತಿ ವಿದ್ಯುತ್ ಘಟಕ ಮತ್ತು ನವೀಕೃತ ರಸಾಯನ ಶಾಸ್ತ್ರ ಪ್ರಯೋಗಾಲಯವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಮಿಲಾಗ್ರಿಸ್ ಕಾಲೇಜಿನ ಈ ಯೋಜನೆ ಎಲ್ಲರಿಗೂ ಮಾದರಿಯಾಗಿದೆ ಇದರಿಂದಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಮಹತ್ವದ ಜೊತೆಗೆ ವಿಷಯಾಧಾರಿತ ಶಿಕ್ಷಣವೂ ದೊರೆಯುತ್ತದೆ ಎಂದರು.
ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ. ಡಾ.ಲಾರೆನ್ಸ್ ಸಿ ಡಿಸೋಜ ಇವರು ಸ್ವಾಗತಿಸಿ ಈ ಯೋಜನೆಯಿಂದ ಸಂಸ್ಥೆಗೆ ಆಗಿರುವ ಆರ್ಥಿಕ ಲಾಭವನ್ನು ವಿವರಿಸಿದರು. ಈ ಸೌರ ವಿದ್ಯುತ್ ಘಟಕ ಅನುಷ್ಠಾನದ ಕೊಡುಗೆ ನೀಡಿದ ಸ್ಟೀಫನ್ ಕರ್ನೇಲಿಯೋ, ನವೀಕೃತ ರಸಾಯನ ಶಾಸ್ತ್ರ ಪ್ರಯೋಗಾಲಯ ಕೊಡುಗೆ ನೀಡಿದ ಭಾಸ್ಕರ ನಾಯ್ಕಾ, ಗೋಪಾಲ ಪಾಲನ್ ಇವರ ಸೇವೆಯನ್ನು ಸ್ಮರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ್ ಡಾ. ವಿನ್ಸೆಂಟ್ ಆಳ್ವ ಕಾಲೇಜಿಗೆ ಮಹತ್ವದ ಕೊಡು ಹಳೇ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಲ್ವದೋರ್ ನೊರೋನ್ಹಾ, ವಿಜ್ಞಾನ ವಿಭಾಗದ ಡೀನ್ ಪ್ರೊ. ಜೋಸೆಫ್ ಪೀಟರ್ ಫೆರ್ನಾಂಡಿಸ್, ಶಿಕ್ಷಕ ವೃಂದದ ಕಾರ್ಯದರ್ಶಿ ಡಾ ಸುರೇಖಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ರೊಸಾಲಿಯಾ ಕಾರ್ಯಕ್ರಮ ನಿರೂಪಿಸಿದರು.