ಉಡುಪಿ ಜಿಲ್ಲೆಯಲ್ಲಿ ಕೊರೋನ ಸಮುದಾಯಕ್ಕೆ ಹರಡಿಲ್ಲ: ಡಿಸಿ ಜಗದೀಶ್
ಉಡುಪಿ, ಜು.1: ಉಡುಪಿ ಜಿಲ್ಲೆಯಲ್ಲಿ ಈವರೆಗೆ ಟ್ರಾವೆಲ್ ಹಿಸ್ಟರಿ ಇಲ್ಲದ ಯಾವುದೇ ಪ್ರಕರಣಗಳು ಸದ್ಯಕ್ಕೆ ಕಂಡುಬಂದಿಲ್ಲ. ಹಾಗಾಗಿ ನಮ್ಮಲ್ಲಿ ಕೊರೋನ ಸಮುದಾಯಕ್ಕೆ ಹರಡಿರುವುದಕ್ಕೆ ಪುರಾವೆಯಾಗಿ ಯಾವುದೇ ಪ್ರಕರಣಗಳಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಪ್ರತಿದಿನ ಮುಂಬೈಯಿಂದ 250-300 ಮಂದಿ ರೈಲು ಹಾಗೂ ಬೇರೆ ವಾಹನ ಗಳಲ್ಲಿ ಜಿಲ್ಲೆಗಳಲ್ಲಿ ಬರುತ್ತಿದ್ದಾರೆ. ಇವರಲ್ಲಿ ವಿಶೇಷ ವರ್ಗ ಮತ್ತು ರೋಗದ ಲಕ್ಷಣಗಳಿರುವವರನ್ನು ಮಾತ್ರ ಪರೀಕ್ಷೆ ಮಾಡುತ್ತಿದ್ದೇವೆ. ಆದುದರಿಂದ ಜಿಲ್ಲೆ ಯಲ್ಲಿ ಪ್ರತಿದಿನ ಪ್ರಕರಣಗಳು ಕಂಡುಬರುತ್ತಿವೆ ಎಂದರು.
ಮೊದಲು ಸರಕಾರ ಮಾರ್ಗಸೂಚಿ ಪ್ರಕಾರ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ ಹೊಸ ಮಾರ್ಗಸೂಚಿ ಪ್ರಕಾರ ಇವರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿಲ್ಲ. ಈಗ ಪ್ರಾಥಮಿಕ ಸಂಪರ್ಕಿತ ರನ್ನು ಪರೀಕ್ಷೆಗೆ ಒಳಪಡಿಸಿದಾಗ ಸಾಕಷ್ಟು ಮಂದಿಯಲ್ಲಿ ಸೋಂಕು ಇರುವುದು ಕಂಡುಬರುತ್ತಿದೆ. ನಮ್ಮಲ್ಲಿ ಪ್ರತಿದಿನ ಐದಾರು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕಿತರು ಸೇರಿದ್ದಾರೆ. ಅದು ಬಿಟ್ಟರೆ ಕೊರೋನ ವಾರಿಯರ್ಸ್, ವೈದ್ಯರು ಹಾಗೂ ಪೊಲೀಸರಲ್ಲಿ ಸೋಂಕು ಕಂಡುಬಂದಿದೆ ಎಂದು ಅವರು ತಿಳಿಸಿದರು.
ಉಳಿದಂತೆ ಬಸ್ ಚಾಲಕರು ಹಾಗೂ ಜವಳಿ ವ್ಯಾಪಾರಿಗೆ ಬೆಂಗಳೂರು ಹೋಗಿ ಬಂದ ಪರಿಣಾಮ ಪಾಸಿಟಿವ್ ಬಂದಿದೆ. ಹಾಗಾಗಿ ಜಿಲ್ಲೆಯಲ್ಲಿ ಕೊರೋನ ಸಮುದಾಯಕ್ಕೆ ಹರಡಿರುವಂತಹ ಯಾವುದೇ ಪ್ರಕರಣಗಳು ಈವರೆಗೆ ಕಂಡುಬಂದಿಲ್ಲ. ಈ ರೋಗ ಸಮುದಾಯಕ್ಕೆ ಹೋಗದಂತೆ ತಡೆ ಯಲು ಮನೆಮನೆ ಸರ್ವೆ ಮಾಡಲಾಗುತ್ತಿದೆ. ಉಸಿರಾಟ, ಜ್ವರ, ಶೀತ, ಕೆಮ್ಮು ಇರುವವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆದುದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ವಹಿಸಬೇಕಿರುವುದು ಬಹಳ ಮುಖ್ಯ ಎಂದು ಅವರು ಹೇಳಿದರು.