ತಾಜ್ಮಹಲ್ ಸಹಿತ ಎಲ್ಲಾ ಸ್ಮಾರಕಗಳಿಗೆ ಜುಲೈ 6ರಿಂದ ವೀಕ್ಷಣೆಗೆ ಅವಕಾಶ
ಹೊಸದಿಲ್ಲಿ, ಜು.2: ವಿಶ್ವಪ್ರಸಿದ್ಧ ತಾಜ್ಮಹಲ್ ಮತ್ತು ದಿಲ್ಲಿಯ ಕೆಂಪು ಕೋಟೆ ಸಹಿತ ದೇಶದ ಎಲ್ಲಾ ಸ್ಮಾರಕಗಳು ಜುಲೈ 6ರಿಂದ ಮತ್ತೆ ತೆರೆಯಲಿದೆ ಎಂದು ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟ್ ಮಾಡಿದ್ದಾರೆ.
ಕೊರೋನ ವೈರಸ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶದಾದ್ಯಂತ ಲಾಕ್ಡೌನ್ ಘೋಷಿಸುವ ಮೊದಲೇ, ಮಾರ್ಚ್ 17ರಂದು ದೇಶದ 3,400ಕ್ಕೂ ಅಧಿಕ ಸ್ಮಾರಕಗಳನ್ನು ಮುಚ್ಚುವಂತೆ ಭಾರತದ ಪುರಾತತ್ವ ಇಲಾಖೆ ಸೂಚಿಸಿತ್ತು. ಬಳಿಕ ಹಂತಹಂತವಾಗಿ ಲಾಕ್ಡೌನ್ ಸಡಿಲಗೊಳಿಸಲು ನಿರ್ಧರಿಸಿದ ಸರಕಾರ ಅನ್ಲಾಕ್ -1 ಪ್ರಕ್ರಿಯೆ ಘೋಷಿಸಿದಾಗ ಪುರಾತತ್ವ ಇಲಾಖೆಯಡಿ ಬರುವ ಸುಮಾರು 820 ಧಾರ್ಮಿಕ ಕೇಂದ್ರಗಳನ್ನು ಪುನರಾರಂಭ ಮಾಡಲಾಗಿತ್ತು. ಕೊರೋನ ವೈರಸ್ ಹಿನ್ನೆಲೆಯಲ್ಲಿ ಉಳಿದ ಸ್ಮಾರಕಗಳನ್ನು ಪುನರಾರಂಭಿಸುವ ಬಗ್ಗೆ ರಾಜ್ಯ ಸರಕಾರಗಳು ನಿರ್ಧರಿಸಬೇಕು ಎಂದು ಕೇಂದ್ರ ಸೂಚಿಸಿತ್ತು.
ಮಧ್ಯಪ್ರದೇಶದ ಸಂಚಿ, ಖುಜುರಾಹೊ ಮುಂತಾದ ವಿಶ್ವಪ್ರಸಿದ್ಧ ಸ್ಮಾರಕಗಳ ಫೋಟೋ ಪ್ರಕಟಿಸಿ ಟ್ವೀಟ್ ಮಾಡಿರುವ ಸಚಿವ ಪಟೇಲ್, ಜುಲೈ 6ರಿಂದ ಎಲ್ಲಾ ಸ್ಮಾರಕಗಳೂ ಮತ್ತೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.