ರಾಜ್ಯದ ಇಮಾಮ್-ಮುಅದ್ಸಿನ್ಗೆ ಮತ್ತೆ ಮೂರು ತಿಂಗಳ ಗೌರವ ಧನ ಬಿಡುಗಡೆ
ಮಂಗಳೂರು, ಜು.3: ರಾಜ್ಯದ 28 ಜಿಲ್ಲೆಗಳ ಮಸೀದಿ-ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಮಾಮ್ ಮತ್ತು ಮುಅದ್ಸಿನ್ರಿಗೆ ಮೂರು ತಿಂಗಳ ಗೌರವಧನವನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿ ಆದೇಶಿಸಿದೆ.
ರಾಜ್ಯದ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿರುವ ಮಸೀದಿ-ಮದ್ರಸಗಳ 295 ಇಮಾಮ್ ಮತ್ತು 298 ಮುಅದ್ಸಿನ್ ಸಹಿತ 593 ಮಂದಿಗೆ ಒಟ್ಟು 62,22,000 (ಅರುವತ್ತೆರಡು ಲಕ್ಷದ ಇಪ್ಪತ್ತೆರಡು ಸಾವಿರ) ರೂ.ವನ್ನು ಜು.1ರಂದು ಬಿಡುಗಡೆಗೊಳಿಸಲಾಗಿದೆ.
ಅಂದರೆ 295 ಇಮಾಮರಿಗೆ ತಲಾ 4 ಸಾವಿರ ರೂ.ನಂತೆ 35,40,000 ರೂ. ಮತ್ತು 298 ಮುಅದ್ಸಿನ್ರಿಗೆ ತಲಾ 3 ಸಾವಿರ ರೂ.ನಂತೆ 26,32,000 ರೂ.ಪಾವತಿಯಾಗಲಿದೆ. ಇದರಲ್ಲಿ ಎಪ್ರಿಲ್, ಮೇ, ಜೂನ್ ತಿಂಗಳ ಗೌರವಧನ ಸೇರಿದೆ. ಆ ಪೈಕಿ ಅತೀ ಹೆಚ್ಚು ಅಂದರೆ ದ.ಕ.ಜಿಲ್ಲೆಯ 60 ಇಮಾಮ್ ಮತ್ತು 67 ಮುಅದ್ಸಿನ್ ಸಹಿತ 127 ಮಂದಿ ಹಾಗೂ ಅತೀ ಕಡಿಮೆ ಅಂದರೆ ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಯ ತಲಾ 2 ಇಮಾಮ್ ಮತ್ತು ಮುಅದ್ಸಿನ್ ಸೇರಿದ್ದಾರೆ.
ಕೊರೋನ-ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಇಮಾಮ್ ಮತ್ತು ಮುಅದ್ಸಿನ್ರ ಆರ್ಥಿಕ ಸಂಕಷ್ಟವನ್ನು ಮನಗಂಡ ರಾಜ್ಯ ವಕ್ಫ್ ಮಂಡಳಿಯ ಸರ್ವ ಸದಸ್ಯರ ಮನವಿಯ ಮೇರೆಗೆ ವಕ್ಫ್ ಮಂಡಳಿ ಹಾಗೂ ವಕ್ಫ್ ಇಲಾಖೆಯ ಅಧಿಕಾರಿಗಳ ವಿಶೇಷ ಪ್ರಯತ್ನ ಫಲವಾಗಿ ಮೊದಲ ಕಂತಿನ ಹಣವು ಈಗಾಗಲೆ ಬಿಡುಗಡೆಗೊಂಡಿದ್ದರೆ ಇದೀಗ ದ್ವಿತೀಯ ಕಂತಿನ ಹಣವು 593 ಮಂದಿಗೆ ಬಿಡುಗಡೆಗೊಂಡಿದೆ.
ಮನವಿ: ಮಸೀದಿ-ಮದ್ರಸ, ಯತೀಂ ಖಾನಾ, ದರ್ಗಾ ಮತ್ತಿತರ ಸಂಸ್ಥೆಗಳು ಈವರೆಗೆ ವಕ್ಫ್ ಇಲಾಖೆಯಲ್ಲಿ ನೋಂದಾಯಿಸದಿದ್ದರೆ ಮತ್ತು ಗೌರವಧನಕ್ಕೆ ಇನ್ನೂ ಅರ್ಜಿ ಸಲ್ಲಿಸದ ವಕ್ಫ್ ಮಂಡಳಿಯಲ್ಲಿ ನೋಂದಣಿಗೊಂಡ ಮಸೀದಿ-ಮದ್ರಸಗಳ ಇಮಾಮ್/ಮುಅದ್ಸಿನ್ರು ಆದಷ್ಟು ಬೇಗ ಆಯಾ ಜಿಲ್ಲೆಯ ವಕ್ಫ್ ಕಚೇರಿಯನ್ನು ಭೇಟಿಯಾಗಬಹುದು (ಹೆಚ್ಚಿನ ಮಾಹಿತಿಗೆ ಮೊ.ಸಂ: 9535185135)ಸಂಪರ್ಕಿಸಬಹುದು) ಎಂದು ಎಂದು ವಕ್ಫ್ ಮಂಡಳಿಯ ಸದಸ್ಯ ಮೌಲಾನ ಶಾಫಿ ಸಅದಿ ಬೆಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.