ಕುಂದಾಪುರ ಗ್ರಾಮಾಂತರ ಠಾಣೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ!
ಕುಂದಾಪುರ, ಜು.3: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಹಲ್ಲೆ ಪ್ರಕರಣದ ಆರೋಪಿಯೊಬ್ಬ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎದುರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜು.3ರಂದು ರಾತ್ರಿ 8.30ರ ಸುಮಾರಿಗೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿರುವ ಆರೋಪಿ ಉಡುಪಿ ಚಿತ್ಪಾಡಿಯ ನಿವಾಸಿ ಕಿಶನ್ ಶೆಟ್ಟಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಸೋಡು ಗ್ರಾಮದಲ್ಲಿ ಜು.1ರಂದು ಸಂಜೆ ವೇಳೆ ಕೌಟುಂಬಿಕ ವಿಚಾರವಾಗಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಿಶನ್, ಆತನ ಅಣ್ಣ ಕಿರಣ್ ಶೆಟ್ಟಿ ಹಾಗೂ ಇತರರ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಿರಣ್ ಶೆಟ್ಟಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತನ್ನ ಅಣ್ಣನನ್ನು ಜೈಲಿಗೆ ಹಾಕಿರುವ ಪೊಲೀಸರನ್ನು ಕೂಡ ಜೈಲಿಗೆ ಹೋಗುವಂತೆ ಮಾಡುವುದಾಗಿ ಹೇಳಿ ಕಿಶನ್ ಶೆಟ್ಟಿ, ಠಾಣೆಯ ಮುಂದೆ ವಿಷ ಕುಡಿದು ಸಾಯುತ್ತೇನೆ ಎಂದು ತನ್ನ ಕೈಯಲಿದ್ದ ಬಾಟಲಿಯಲ್ಲಿದ್ದ ವಿಷವನ್ನು ಕುಡಿಯಲು ಪ್ರಯತ್ನಿಸಿದ್ದನು. ಆಗ ಕರ್ತವ್ಯದಲ್ಲಿದ್ದ ಠಾಣಾ ಸಿಬ್ಬಂದಿ ಆತನನ್ನು ತಡೆದರೆನ್ನಲಾಗಿದೆ.