ಕೋವಿಡ್-19 ನಿಯಂತ್ರಣ ಹೆಸರಿನಲ್ಲಿ ಸರಕಾರದಿಂದ ಕೋಟ್ಯಂತರ ರೂ. ಹಗರಣ: ಎಸ್ಡಿಪಿಐ

ಬೆಂಗಳೂರು, ಜು.5: ರಾಜ್ಯ ಸರಕಾರವು ಕೋವಿಡ್-19 ನಿರ್ವಹಣೆಗಾಗಿ ಇಲ್ಲಿಯವರೆಗೆ ಮೂರು ಸಾವಿರದ ಮುನ್ನೂರ ತೊಂಬತ್ತೆರಡು (3392) ಕೋಟಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದು, ಯಾವ ಯಾವ ವಿಷಯಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಮೂಲಕ ಕೇಳಿದಾಗ ಆಡಿಟ್ ಆಗಬೇಗು ಎಂಬ ಮಾಹಿತಿಯನ್ನು ರವಾನಿಸುವ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.
ಯಾವ ರೀತಿ ಹಗರಣ ನಡೆದಿದೆ ಎಂಬುವುದಕ್ಕೆ ಉದಾಹರಣೆಯಾಗಿ ನೋಡಿದರೆ 500 ಮಿ.ಲಿ ಸ್ಯಾನಿಟೈಸರ್ ಒಂದಕ್ಕೆ ರಾಜ್ಯ ಸರಕಾರದ ಅಂಗಸಂಸ್ಥೆ 'ಕರ್ನಾಟಕ ಲಾಜಿಸ್ಟಿಕ್ ಲಿಮಿಟೆಡ್' ಸಂಸ್ಥೆಯು ರುಪಾಯಿ 78 ರಂತೆ ಪೂರೈಕೆ ಮಾಡಬಹುದು ಎಂದು ಟೆಂಡರ್ ಹಾಕಿದಾಗ ಹೇಳಿಕೊಂಡಿದೆ. ಆದರೆ ಅವರನ್ನು ಹೊರತುಪಡಿಸಿ ಒಂದು ಚಿಕ್ಕ ಬಾಟಲ್ ಸ್ಯಾನಿಟೈಸರಿಗೆ 600 ರಂತೆ ಖರೀದಿ ಮಾಡಿದ್ದಾರೆ. ಅದೇ ರೀತಿ ಒಂದು ಥರ್ಮಲ್ ಸ್ಕ್ಯಾನರ್ ಬೆಲೆ ಗರಿಷ್ಠ 3,650 ಮಾತ್ರ. ಆದರೆ ಇವರು 9 ಸಾವಿರಕ್ಕೆ ಉಲ್ಲೇಖ ಮಾಡಿದ್ದಾರೆ.
ಅದೇ ರೀತಿ ಆರ್.ಅಶೋಕ್ ಉಸ್ತುವಾರಿಯಾಗಿರುವ ರೆವಿನ್ಯೂ ಡಿಪಾಟ್ಮೆರ್ಂಟ್ ಅಧಿಕಾರಿ ಮಂಜುನಾಥ್ ಪ್ರಸಾದ್ ಎಂಬವರು ಹೈಕೋರ್ಟ್ ಗೆ ಹಾಕಿರುವಂತಹ ಅಫಿಡವಿಟ್ ಪ್ರಕಾರ ರಾಜ್ಯದಲ್ಲಿ ಸುಮಾರು 81 ಲಕ್ಷ ಆಹಾರ ಪ್ಯಾಕೆಟ್ಗಳನ್ನು ವಿತರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಒಂದು ಪ್ಯಾಕೆಟ್ಗೆ ಗರಿಷ್ಠ 250 ಖರ್ಚು ಆಗಬಹುದು. ಆದರೆ ಇವರು 250 ರಿಂದ 1,650ರಷ್ಟು ಖರ್ಚು ಮಾಡಿರುವುದಾಗಿ ಉಲ್ಲೇಖಿಸಿದ್ದಾರೆ. ಇದು ಹಗಲು ದರೋಡೆಯಾಗಿದೆ. 81 ಲಕ್ಷ ಫುಡ್ ಪ್ಯಾಕೆಟ್ಗಳು ವಿತರಣೆ ಆಗಿದೆ ಎಂಬುವುದಕ್ಕೆ ಸರಕಾರದ ಬಳಿ ಏನು ದಾಖಲೆಗಳಿವೆ ಎಂದು ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಮಜೀದ್ ಖಾನ್ ಪ್ರಶ್ನಿಸಿದ್ದಾರೆ.
ಒಂದು ವೆಂಟಿಲೇಟರ್ ಬೆಲೆ ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿಗಳು. ಆದರೆ ಸರಕಾರ ರೂ.12 ಲಕ್ಷದಂತೆ 1,000 ವೆಂಟಿಲೇಟರ್ಗಳನ್ನು ಖರೀದಿ ಮಾಡಿದೆ. ಇದೇ ತರಹ ಮಾಸ್ಕ್, ಸರ್ಜಿಕಲ್ ಕೈ-ಗ್ಲೌಸ್, ಪರೀಕ್ಷಾ ಕೈ-ಗ್ಲೌಸ್, ಆಕ್ಸಿಜನ್ ಸಿಲಿಂಡರ್ ಗಳಲ್ಲಿ ದುಪ್ಪಟ್ಟು ಹಣದ ಲೆಕ್ಕ ತೋರಿಸಿ ಜನರಿಗೆ ಮೋಸ ಮಾಡಿದೆ. ಆದರೆ ಎಲ್ಲಿ ಯಾವ ರೀತಿ ವಿತರಣೆ ನಡದಿದೆ ಎಂಬುದಕ್ಕೆ ಇವರಲ್ಲಿ ಮಾಹಿತಿ ಇಲ್ಲ ಎಂದು ದೂರಿದ್ದಾರೆ.
ಇಲ್ಲಿಯವರೆಗೆ ರಾಜ್ಯದಲ್ಲಿ ರೂ. 6.2 ಲಕ್ಷ ಜನರಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿದೆ ಎಂದು 530 ಕೋಟಿ ಕ್ಲೈಮ್ ಮಾಡಿದ್ದಾರೆ. ಸರಕಾರ ನಿಗದಿಪಡಿಸಿದಂತೆ ಒಬ್ಬರಿಗೆ 4,000 ರೂ.ಗಳು ಅದರ ಪ್ರಕಾರ ರೂ. 240 ಕೋಟಿ ಆಗಬೇಕು ಆದರೆ 530 ಕೋಟಿ ರೂ. ಕ್ಲೈಮ್ ಮಾಡಿದ್ದಾರೆ. ಅದೇ ರೀತಿ ಮಾಹಿತಿ ಕಿಯೋಸ್ಕ್, ಸೋಂಕಿತರ ಖರ್ಚು ಇತ್ಯರ್ಥಕ್ಕೆ ಹೆಸರುಗಳಿಂದ ಬಹುಕೋಟಿ ರೂಪಾಯಿಗಳನ್ನು ಲೂಟಿ ಹೊಡೆದಿದ್ದಾರೆ.
ಈ ಹಗರಣದ ನೈತಿಕ ಹೊಣೆ ಹೊತ್ತು ತಕ್ಷಣ ಅರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಮತ್ತು ಹಗರಣದಲ್ಲಿ ಕಂದಾಯ ಸಚಿವ ಆರ್. ಅಶೋಕ್ರವರ ಹೆಸರು ಕೇಳಿ ಬಂದಿರುವುದರಿಂದ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಪಡೆಯಬೇಕು ಮತ್ತು ಈ ಹಗರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು ಎಂದು ಮಜೀದ್ ಖಾನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







