ಭಟ್ಕಳ: ವುಮೆನ್ಸ್ ಸೆಂಟರ್ ನಲ್ಲಿ 64 ಕೊರೋನ ಸೋಂಕಿತರ ಆರೈಕೆ
ಸ್ಥಳೀಯರಿಂದ ವಿರೋಧ; ಅಧಿಕಾರಿಗಳಿಂದ ಮನವೊಲಿಕೆ
ಭಟ್ಕಳ: ಭಟ್ಕಳದಲ್ಲಿ ಕಳೆದ 3-4 ದಿನಗಳಿಂದ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ರವಿವಾರ ಕೂಡ 9 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೋನ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು ಹೆಬಳೆ ಪಂಚಾಯತ್ ವ್ಯಾಪ್ತಿಯ ಸುಸಜ್ಜಿತ ವುಮೆನ್ಸ್ ಸೆಂಟರ್ ಕಟ್ಟಡವನ್ನು ಕೊರೋನ ಸೋಂಕಿತರ ಆರೈಕೆ ಕೇಂದ್ರವನ್ನಾಗಿ ಮಾರ್ಪಡಿಸಿದ್ದು ರವಿವಾರ 64 ಸೊಂಕಿತರನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಗರ್ಭಿಣಿ ಮಹಿಳೆ ಸೇರಿದಂತೆ 7 ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದೆ.
ಕಾರವಾರದ ಕೋವಿಡ್ ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯಗಳು ಹಾಗೂ ಸ್ಥಳಾವಕಾಶ ಇಲ್ಲದ ಕಾರಣ ಗುಣಮುಖರಾಗಿ ಬಂದವರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಭಟ್ಕಳದಲ್ಲೇ ಸೋಂಕಿತರ ಆರೈಕೆ ಕೇಂದ್ರವನ್ನು ಮಾಡಬೇಕೆಂದು ತಂಝೀಮ್ ಸಂಸ್ಥೆಯು ಪ್ರಯತ್ನಿಸಿದ್ದು, ಜಿಲ್ಲಾ ಹಾಗೂ ತಾಲೂಕಾಡಳಿತದ ಅನುಮತಿಯೊಂದಿಗೆ ಇಲ್ಲಿನ ಸೋನಾರಕೇರಿ ವಸತಿನಿಲಯವೊಂದರಲ್ಲಿ ತಾತ್ಕಾಲಿಕವಾಗಿ ಕೆಲವು ಸೋಂಕಿತರನ್ನು ಇಡಲಾಗಿತ್ತು. ಈ ಮಧ್ಯೆ ಅಲ್ಲಿನ ಸ್ಥಳಿಯರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಾರ್ವಜನಿಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಖದಿಜಾ ಖಾಜಿ ಹಾಗೂ ಅವರ ಪತಿ ಝುಬೈರ್ ತಮ್ಮ ಸುಸಜ್ಜಿತ ಕಟ್ಟಡವನ್ನು ಸೋಂಕಿತರ ಆರೈಕೆ ಕೇಂದ್ರವಾಗಿ ಬಿಟ್ಟುಕೊಡಲು ಒಪ್ಪಿಕೊಂಡಿದ್ದು ತಂಝೀಮ್ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ಪ್ರ.ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ ಯವರು ಸುಮಾರು 100 ಹಾಸಿಗೆಯುಳ್ಳ ಕೋವಿಡ್ -19 ಅರೈಕೆ ಕೇಂದ್ರವನ್ನು ಸಿದ್ದಗೊಳಿಸಿದ್ದು, ಈಗ ಸೊಂಕಿತರಿಗಾಗಿ ತೆರೆದುಕೊಂಡಿದೆ. ಇಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದ್ದು ಸೋಂಕಿತರೆಲ್ಲರೂ ಉತ್ತಮ ಆರೋಗ್ಯಯುತ ವಾತವರಣದಲ್ಲಿ ಇರುವಂತಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರಿಂದ ವಿರೋಧ: ಹೆಬಳೆ ಪಂಚಾಯತ್ ವ್ಯಾಪ್ತಿಯ ಈ ಕಟ್ಟಡದಲ್ಲಿ ಕೊರೋನ ಸೋಂಕಿತರನ್ನು ಸ್ಥಳಾಂತರಿಸಲಾಗುತ್ತಿದೆ ಎಂಬ ಸುದ್ದಿ ತಿಳಿದ ಈ ಭಾಗದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಇಲ್ಲಿ ಕೊರೋನ ಸೋಂಕಿತರನ್ನು ಸ್ಥಳಾಂತರಿಸುವುದು ಬೇಡ ಎಂದು ಪಟ್ಟು ಹಿಡಿದಿದ್ದು ಪೊಲೀಸರು ಹಾಗೂ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಾರ್ವಜನಿಕರ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.