ಕ್ಷುಲ್ಲಕ ರಾಜಕಾರಣಕ್ಕಾಗಿ ಒಡಕು ಮೂಡಿಸುವ ಪ್ರಯತ್ನ ಸಲ್ಲ: ಸಚಿವ ಸುಧಾಕರ್
ಬೆಂಗಳೂರು, ಜು. 6: `ಕೊರೋನ ಸೋಂಕಿನ ವಿರುದ್ಧದ ಈ ಹೋರಾಟದಲ್ಲಿ ನಾವೆಲ್ಲರೂ ಯೋಧರೇ. ಕ್ಷುಲ್ಲಕ ರಾಜಕಾರಣಕ್ಕಾಗಿ ಸುಳ್ಳು ಸುದ್ದಿ ಹರಡುವ, ಇಡೀ ಸಮಾಜ ಒಗ್ಗಟ್ಟಿನಿಂದ ಇರಬೇಕಾದ ಈ ಸಂದರ್ಭದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ, ಹಗಲಿರುಳು ದುಡಿಯುತ್ತಿರುವ ಸರಕಾರ ಮತ್ತು ಕೊರೋನ ಯೋಧರಿಗೆ ಮಸಿ ಬಳಿಯುವ ಈ ದುಷ್ಕೃತ್ಯವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕಾರ್ಮಿಕರು ಬೆಂಗಳೂರು ತೊರೆದು ಹೋಗುತ್ತಿರುವ ಸುಳ್ಳು ವಿಡಿಯೋ ಮಾಡಿರುವ ವ್ಯಕ್ತಿಯ ಕುರಿತು ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕೊರೋನ ಸೋಂಕಿನ ಬಗ್ಗೆ ಆತಂಕ ಬೇಡ, ಮುನ್ನಚ್ಚರಿಕೆ ಇರಲಿ. ಮಳೆಗಾಲ ಆರಂಭ ಆಗಿರುವುದರಿಂದ ಶೀತ ಜ್ವರ, ನೆಗಡಿ, ಕೆಮ್ಮು ಬರುವುದು ಸಾಮಾನ್ಯ. ನಿಮಗೆ ಯಾವುದೇ ರೀತಿಯ ಲಕ್ಷಣ ಕಂಡುಬಂದ ಕೂಡಲೇ ನಿಮ್ಮ ಹತ್ತಿರದ ಫೀವರ್ ಕ್ಲಿನಿಕ್ಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ. ಪ್ರಾಥಮಿಕ ಹಂತದಲ್ಲೇ ಎಚ್ಚರ ವಹಿಸಿದರೆ ಚಿಕಿತ್ಸೆ ಸುಲಭ' ಎಂದು ಸಲಹೆ ಮಾಡಿದ್ದಾರೆ.
`ಸ್ವಾತಂತ್ರ್ಯ ಹೋರಾಟಗಾರರು, ದೀನ ದಲಿತರ ಪರ ಸದಾ ಧ್ವನಿಯಾಗಿದ್ದ ನಾಯಕ, ಭಾರತೀಯ ಕೃಷಿಗೆ ಆಧುನಿಕ ಸ್ಪರ್ಶ ನೀಡಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಶ್ರಮಿಸಿದ ಹಸಿರು ಕ್ರಾಂತಿಯ ಹರಿಕಾರ, ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವಪೂರ್ಣ ನಮನಗಳು'
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ