ಪ್ರತ್ಯೇಕ ಕಳವು ಪ್ರಕರಣ: ಸೊತ್ತು ವಿಲೇವಾರಿಗೆ ಸಹಕರಿಸಿದ ಆರೋಪಿಗೆ ಶಿಕ್ಷೆ
ಉಡುಪಿ, ಜು.6: ಉಡುಪಿ ನಗರದಲ್ಲಿ ಐದು ವರ್ಷಗಳ ಹಿಂದೆ ನಡೆದ ಎರಡು ಕಳವು ಪ್ರಕರಣಗಳಲ್ಲಿ ಸೊತ್ತುಗಳನ್ನು ವಿಲೇವಾರಿ ಮಾಡಲು ಸಹಕರಿಸಿದ ಆರೋಪಿಗೆ ಉಡುಪಿಯ ಒಂದನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅನಿಲ್ ಕುಮಾರ್ ಕುಮಾರ್ ಎಂಬಾತ ಚಿಕ್ಕಮಗಳೂರು 2015ರ ಫೆ.1ರಿಂದ ಫೆ.8ರ ಮಧ್ಯಾವಧಿಯಲ್ಲಿ ರಾತ್ರಿ ವೇಳೆ ಪುತ್ತೂರು ಗ್ರಾಮದ ಅಂಬಾಗಿಲು ವಾಸುಕಿ ನಗರದ ನಾಗೇಶ್ ರಾವ್ ಹಾಗೂ 2015ರ ಜ.22ರಿಂದ 23ರ ರಾತ್ರಿ ವೇಳೆ 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಪಿಲಿಚಾಮುಂಡಿ ರಸ್ತೆಯಲ್ಲಿರುವ ಪ್ರದೀಪ್ ಕುಮಾರ್ ಎಂಬವರ ಮನೆಗಳಿಗೆ ನುಗ್ಗಿ ಕಳವು ಮಾಡಿದ್ದನು.
ಅವುಗಳನ್ನು ಎರಡನೇ ಆರೋಪಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ನಾಗೇಶ ಕಳವು ಸೊತ್ತೆಂದು ಗೊತ್ತಿದ್ದರೂ ಮಾರಾಟ ಮಾಡಲು ಸಹಕರಿಸಿದ್ದನು. ಬಳಿಕ ಇಬ್ಬರು ಆ ಹಣವನ್ನು ಖರ್ಚು ಮಾಡಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆರೋಪಿ ಅನಿಲ್ ಕುಮಾರ್ ತನ್ನ ತಪ್ಪನ್ನು ಈ ಮೊದಲೇ ಒಪ್ಪಿಕೊಂಡು ಶಿಕ್ಷೆ ಅನುಭವಿಸಿದ್ದನು. ಎರಡನೇ ಆರೋಪಿ ವಿರುದ್ದದ ಸಾಕ್ಷಿ ವಿಚಾರಣೆಯಲ್ಲಿ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾ ಧೀಶ ಮಂಜುನಾಥ್ ಜು.1ರಂದು ಎರಡು ಪ್ರಕರಣಗಳಲ್ಲಿ ತಲಾ 2,000ರೂ. ದಂಡ ವಿಧಿಸಿ ಶಿಕ್ಷೆ ನೀಡಿದೆ.
ಅಭಿಯೋಜನೆಯ ಪರವಾಗಿ ಉಡುಪಿ ಕಾನೂನು ಅಧಿಕಾರಿ(ಕಿರಿಯ) ಮಮ್ತಾಜ್ ಪ್ರಕರಣದ ವಿಚಾರಣೆ ನಡೆಸಿದ್ದು, ಈಗಿನ ಸಹಾಯಕ ಸರಕಾರಿ ಅಭಿಯೋಜಕ ಮೋಹಿನಿ ವಾದವನ್ನು ಮಂಡಿಸಿದ್ದರು.