ಕಾಡು ಪ್ರದೇಶಕ್ಕೆ ತೆರಳಿ ಕೊರೋನ ಸಂಪರ್ಕದ ಬಗ್ಗೆ ಮಾಹಿತಿ ನೀಡಿದ ನರ್ಸ್, ಆಶಾ ಕಾರ್ಯಕರ್ತೆಗೆ ವ್ಯಾಪಕ ಪ್ರಶಂಸೆ
ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ ಅರೋಗ್ಯ ಸಚಿವರು
ಬೆಳ್ತಂಗಡಿ: ಜಗತ್ತಿನಾದ್ಯಂತ ಕೊರೋನ ಮಹಾಮಾರಿ ವಿರುದ್ಧ ಕೊರೋನ ವಾರಿಯರ್ಸ್ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಬೆಳ್ತಂಗಡಿ ತಾಲೂಕಿನ ಕಾಡು ಪ್ರದೇಶದ ಮಧ್ಯೆ ಮರದ ಸೇತುವೆಗಳನ್ನು ದಾಟಿ ಆಶಾ ಕಾರ್ಯಕರ್ತೆ ಮತ್ತು ನರ್ಸ್ ಒಬ್ಬರು ಸಲ್ಲಿಸುತ್ತಿರುವ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾ.ಪಂ ವ್ಯಾಪ್ತಿಯ ಅಟ್ರಿಂಜೆ ಎಂಬಲ್ಲಿ ಕಾಡಿನ ಮಧ್ಯೆ ವಾಸಿಸುತ್ತಿರುವ ಆರು ಕೊರಗ ಕುಟುಂಬಗಳಲ್ಲಿ ಒರ್ವ ಸದಸ್ಯ ಎರಡನೇ ಸಂಪರ್ಕ ಹೊಂದಿರುವ ಬಗ್ಗೆ ಕುಟುಂಬಿಕರಿಗೆ ಹೋರ್ಮ್ ಕ್ವಾರೆಂಟೈನ್ ಮಾಹಿತಿ ನೀಡಲು ಅಪಾಯಕಾರಿ ಮರದ ಸೇತುವೆ ದಾಟಿ ಆಶಾ ಕಾರ್ಯಕರ್ತೆ ತೆರಳಿದ್ದಾರೆ. ಆಶಾ ಕಾರ್ಯಕರ್ತೆಯಾದ ಹೇಮಲತಾ ಶೆಟ್ಟಿ ಮತ್ತು ನರ್ಸ್ ಪ್ರೀತಿ ಎಂಬವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಲ್ಲಿ ಆರು ಕೊರಗ ಕುಟುಂಬಗಳು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ವಾಸಿಸುತ್ತಿದ್ದು, ಅರಣ್ಯದೊಳಗೆ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ ಹೊರಬನ್ನಿ ಎಂದು ಅಧಿಕಾರಿಗಳು ಹೇಳುತ್ತಿದ್ದರೆ, ಅರಣ್ಯದಿಂದ ಹೊರಬರಲು ಈ ಕುಟುಂಬಗಳು ಸಿದ್ದವಿಲ್ಲ. ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಇದೇ ಸ್ಥಿತಿ ಮುಂದುವರಿದಿದೆ.
ಕೊರೋನ ವಾರಿಯರ್ಸ್ ಅಪಾಯಕಾರಿ ಮರದ ಸೇತುವೆ ಮೇಲೆ ಹೋಗಿ ಸೇವೆ ಮಾಡಿದ ಮಾಹಿತಿ ತಿಳಿದ ಅರೋಗ್ಯ ಸಚಿವ ಶ್ರಿರಾಮುಲು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.