ಬಾಬಾಸಾಹೇಬ್ ಅಂಬೇಡ್ಕರ್ ನಿವಾಸದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು: ಎಫ್ಐಆರ್ ದಾಖಲು
ಮುಂಬೈ : ಮುಂಬೈಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ವಾಸಿಸುತ್ತಿದ್ದ ಮನೆ `ರಾಜಗೃಹ'ದ ಮೇಲೆ ಮಂಗಳವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ ದಾಂಧಲೆಗೈದಿದ್ದಾರೆ. ಈ ಕುರಿತಂತೆ ಮುಂಬೈ ಪೊಲೀಸರು ಇಂದು ಎಫ್ಐಆರ್ ದಾಖಲಿಸಿದ್ದಾರೆ.
ಡಾ. ಅಂಬೇಡ್ಕರ್ ಅವರ ಮೊಮ್ಮಗ ಸುಜತ್ ಅವರ ಪ್ರಕಾರ ಅಂಬೇಡ್ಕರ್ ಕುಟುಂಬಸ್ಥರು ಮನೆಯಲ್ಲಿದ್ದ ಸಂದರ್ಭ ಕೆಲ ವ್ಯಕ್ತಿಗಳು ಎರಡು ಕೊಠಡಿಗಳತ್ತ ಕಲ್ಲು ತೂರಿದ್ದಾರೆ. ಒಂದು ಕೊಠಡಿ ಮ್ಯೂಸಿಯಂ ಹಾಗೂ ಫೋಟೋ ಗ್ಯಾಲರಿ ಹಾಗೂ ಬಾಬಾಸಾಹೇಬ್ ಅವರ ಪುಸ್ತಕಗಳ ಕೊಠಡಿಯಾಗಿದ್ದರೆ ಇನ್ನೊಂದು ಅವರ ಕಚೇರಿ/ಸಭಾ ಕೊಠಡಿಯಾಗಿದೆ. ಎಂದು ವಂಚಿತ್ ಬಹುಜನ್ ಅಘಾಡಿ ಅಧ್ಯಕ್ಷ, ಅಂಬೇಡ್ಕರ್ ಅವರ ಪುತ್ರ ಪ್ರಕಾಶ್ ಅಂಬೇಡ್ಕರ್ ಅವರ ಮಗನಾಗಿರುವ ಸುಜತ್ ತಿಳಿಸಿದ್ದಾರೆ.
ದಾಳಿ ವೇಳೆ ಅಂಬೇಡ್ಕರ್ ಅವರ ಮನೆಯ ಹೊರಗಿದ್ದ ಹೂವಿನ ಕುಂಡಗಳಿಗೆ ಕೂಡ ಹಾನಿಯಾಗಿದೆ. ಘಟನೆಯನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಖಂಡಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.