ಆತಂಕದಿಂದ ಕೊರೋನ ಸೋಂಕನ್ನು ಗೆಲ್ಲಲಾಗದು: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ಜು. 8: ಅಂಜಿಕೆ ಅಥವಾ ಆತಂಕದಿಂದ ಕೊರೋನ ಸೋಂಕನ್ನು ಗೆಲ್ಲಲಾಗದು. ಆತ್ಮವಿಶ್ವಾಸ, ಸೂಕ್ತ ವೈದ್ಯಕೀಯ ಶುಶ್ರೂಷೆಗಳಿಂದ ಕೊರೋನ ವೈರಸ್ ಸೋಂಕಿನಿಂದ ಗುಣಮುಖರಾಗಬಹುದು' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ಟ್ವೀಟ್ ಮಾಡಿರುವ ಅವರು, `ಕೋವಿಡ್-19 ಗೆದ್ದು ಬಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ 96ರ ಹರೆಯದ ಹಿರಿಯರಾದ ಗೋವಿಂದಮ್ಮನವರಿಗೆ ಅಭಿನಂದನೆಗಳು. ತಮ್ಮ ಧೈರ್ಯ ಮತ್ತು ಜೀವನೋತ್ಸಾಹಗಳಿಂದ ಅವರು ರಾಜ್ಯದ ಜನರಿಗೆ ಆದರ್ಶರಾಗಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಜಾಗೃತೆ ಅಗತ್ಯ: `ಕೊರೋನ ಸೋಂಕಿನ ವಿರುದ್ಧ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ 96 ವಯಸ್ಸಿನ ಹಿರಿಯ ತಾಯಿ ಗೋವಿಂದಮ್ಮ ಹೋರಾಡಿ ಗೆದ್ದು ಬಂದಿದ್ದಾರೆ. ಕೋವಿಡ್ ನಿರ್ಮೂಲನೆಗಾಗಿ ಹೋರಾಡುತ್ತಿರುವ ಸರಕಾರಕ್ಕೆ ಈ ತಾಯಿಯ ಸ್ಫೂರ್ತಿದಾಯಕ ನುಡಿಗಳು ಶಕ್ತಿ ನೀಡಿವೆ. ತಲ್ಲಣಕ್ಕೊಳಗಾಗಬೇಡಿ, ಆತಂಕಪಡದೆ ಸರಕಾರ ಸೂಚಿಸಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ' ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ಟರ್ ಮೂಲಕ ಜನರಿಗೆ ಮನವಿ ಮಾಡಿದ್ದಾರೆ.
ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಸಜ್ಜುಗೊಳಿಸಲಾಗುತ್ತಿರುವ ಶಿವಾಜಿನಗರದ ಬ್ರಾಡ್ವೇ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಲಾಯಿತು. ಇನ್ಫೋಸಿಸ್ ಸಂಸ್ಥೆ ಮೂಲಸೌಕರ್ಯ ಒದಗಿಸುತ್ತಿರುವ ಈ ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ಸಿಬ್ಬಂದಿಗೆ ನೇಮಕಕ್ಕೆ ಸೂಚಿಸಲಾಗಿದೆ'
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ