ಶಿಕ್ಷಣದೊಂದಿಗೆ ರಾಜಕಾರಣ ಬೆರೆಸಬೇಡಿ: ಸಚಿವ ರಮೇಶ್ ಪೋಖ್ರಿಯಾಲ್
ಹೊಸದಿಲ್ಲಿ,ಜು.9: ಕೋವಿಡ್-19 ಕಾರಣ ನೀಡಿ ಸಿಬಿಎಸ್ಇ ಪಠ್ಯಕ್ರಮದಲ್ಲಿ ಕೆಲವು ವಿಷಯಗಳನ್ನು ಕೈಬಿಟ್ಟಿರುವ ಬಗ್ಗೆ ಟೀಕೆ ವ್ಯಕ್ತವಾಗಿರುವ ಬೆನ್ನಲ್ಲೇ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಸರಕಾರದ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೆಲವು ಪಾಠಗಳನ್ನು ತೆಗೆದುಹಾಕಿರುವುದು ಈಗಿನ ಪರಿಸ್ಥಿತಿಯಲ್ಲಿ ತೆಗೆದುಕೊಂಡಿರುವ ಕ್ರಮ ಮಾತ್ರ. ಶಾಲಾ ಅವಧಿಯೂ ಕಡಿತವಾಗಿರುವುದರಿಂದ ವಿದ್ಯಾರ್ಥಿಗಳ ಮೇಲೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ. ಶಿಕ್ಷಣದೊಂದಿಗೆ ರಾಜಕೀಯ ಬೆರೆಸಬಾರದು ಎಂದು ಹೇಳಿದರು.
ಕೆಲವರು ಸರಿಯಾದ ಮಾಹಿತಿ ಇಲ್ಲದೆ ಟೀಕೆ ಮಾಡುತ್ತಿದ್ದಾರೆ. ಸರಕಾರದ ಕ್ರಮದ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದಿಂದಲೇ ಈ ರೀತಿ ಟೀಕೆ ಮಾಡಲಾಗುತ್ತಿದೆ ಎಂದು ಅವರು ಗುರುವಾರ ಹೇಳಿದ್ದಾರೆ.
ಸಿಬಿಎಸ್ಇ ಪಠ್ಯಕ್ರಮದಿಂದ ಪ್ರಜಾಪ್ರಭುತ್ವ, ಬಹುತ್ವ ಕುರಿತ ಪಾಠಗಳನ್ನು ಇತ್ತೀಚೆಗೆ ಸಚಿವಾಲಯ ಕೈಬಿಟ್ಟಿದ್ದಕ್ಕೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು. ಒಂದು ನಿರ್ದಿಷ್ಟ ಸಿದ್ದಾಂತವನ್ನು ಮಕ್ಕಳ ಮೇಲೆ ಹೇರುವ ಹುನ್ನಾರ ಅಡಗಿದೆ ಎಂದು ಸರಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದಿದ್ದವು.