ಸಾಲವಾಗಿ ಪಡೆದ ಹಣವನ್ನು ದಂಡ ಸಹಿತ ಹಿಂದಿರುಗಿಸುವಂತೆ ಕೋರ್ಟ್ ಆದೇಶ
ಮೂಡುಬಿದಿರೆ, ಜು.9: ಸಾಲವಾಗಿ ಪಡೆದುಕೊಂಡ ಹಣವನ್ನು ದಂಡ ಸಹಿತ ಹಿಂದಿರುಗಿಸುವಂತೆ ಮುಲ್ಕಿ ಮೊಯಿಲೊಟ್ಟಿವಿನ ವ್ಯಕ್ತಿಗೆ ಮೂಡುಬಿದಿರೆ ಕೋರ್ಟ್ ಆದೇಶ ನೀಡಿದೆ.
ಮುಲ್ಕಿಯ ಹೇಮಂತ್ ಸಾಲ್ಯಾನ್ ಎಂಬವರು ಮುಲ್ಕಿ ಅತಿಕಾರಿಬೆಟ್ಟು ರತ್ನಾಕರ ಕೋಟ್ಯಾನ್ ಎಂಬವರಿಂದ 2 ಲಕ್ಷ ರೂ.. ಸಾಲವಾಗಿ ಪಡೆದಿದ್ದರು. ಬಳಿಕ ಸಾಲ ಮರುಪಾವತಿಗೆ ನೀಡಿದ ಚೆಕ್ ಬ್ಯಾಂಕ್ನಲ್ಲಿ ಹಣವಿಲ್ಲದೆ ಅಮಾನ್ಯಗೊಂಡಿತ್ತು. ಬಳಿಕ ಸಾಲವನ್ನು ಮರುಪಾವತಿಸದೆ ಸತಾಯಿಸಿದ್ದರೆನ್ನಲಾಗಿದೆ. ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿ ಹೇಮಂತ್ ಸಾಲ್ಯಾನ್ ವಿರುದ್ಧ ರತ್ನಾಕರ ಕೋಟ್ಯಾನ್ ಅವರು 2016ರಲ್ಲಿ ಮೂಡುಬಿದಿರೆ ಕೋರ್ಟ್ನಲ್ಲಿ ದಾವೆ ಹೂಡಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಹೇಮಂತ್ ಸಾಲ್ಯಾನ್ ಅವರನ್ನು ದೋಷಿ ಎಂದು ಪರಿಗಣಿಸಿ ಪಡಕೊಂಡ ಸಾಲದ ಜತೆಗೆ ರೂ. 5 ಸಾವಿರ ದಂಡ ಸೇರಿಸಿ ಹಣ ಮರುಪಾವತಿಸುವಂತೆ ಆದೇಶ ನೀಡಿದೆ. ಅರ್ಜಿದಾರರ ಪರ ಇಲ್ಲಿನ ವಕೀಲ ಶರತ್ ಶೆಟ್ಟಿ ವಾದಿಸಿದ್ದರು.
Next Story