ಉಡುಪಿ: ‘ನಗರಸಭೆಗೆ ಧಿಕ್ಕಾರ’ ಬ್ಯಾನರ್ ಹಾಕಿ, ರಸ್ತೆ ಶ್ರಮದಾನಕ್ಕೆ ಸಜ್ಜು!
ಉಡುಪಿ, ಜು.11: ಉಡುಪಿ ತಾಲೂಕಿನ 76 ಬಡಗಬೆಟ್ಟು ಗ್ರಾಮದಲ್ಲಿ ಹಾದುಹೋಗುವ ಕುಕ್ಕಿಕಟ್ಟೆಯ ಮುಖ್ಯರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಚರಂಡಿ ಸಮಸ್ಯೆ ತಲೆದೋರಿದ್ದು, ಇದರ ವಿರುದ್ಧ ಉಡುಪಿ ನಗರ ಸಭೆಗೆ ಧಿಕ್ಕಾರ ಎಂಬ ಬ್ಯಾನರ್ ಅಳವಡಿಸಿ, ರಸ್ತೆ ಶ್ರಮದಾನಕ್ಕಾಗಿ 40 ಮಂದಿ ಯುವಕರ ತಂಡ ಸಿದ್ಧವಾಗಿದೆ.
ಉಡುಪಿ ನಗರ ಸಭೆಯ ವ್ಯಾಪ್ತಿಯಲ್ಲಿರುವ ಈ ರಸ್ತೆಯ ಒಂದು ಬದಿ ಇಂದಿರಾನಗರ ವಾರ್ಡ್ ಹಾಗೂ ಇನ್ನೊಂದು ಬದಿ ಚಿಟ್ಪಾಡಿ ವಾರ್ಡಿಗೆ ಸೇರುತ್ತದೆ. ಸಮಸ್ಯೆ ಬಗ್ಗೆ ಸಾರ್ವಜನಿಕರು ಹಾಗೂ ಸ್ಥಳೀಯರು ನಗರಸಭೆ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರುಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯರು ಹಗಲು-ರಾತ್ರಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮದ್ ನೇತೃತ್ವದ ಯುವಕರ ತಂಡ ಸಂಕಲ್ಪಮಾಡಿದೆ. ಸಮಸ್ಯೆ ಇರುವ ಸ್ಥಳದಲ್ಲಿ ಎರಡು ಬ್ಯಾನರ್ಗಳನ್ನು ಅಳವಡಿಸಿ, ಉಡುಪಿ ನಗರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಜು.18ರವರೆಗೆ ಗಡುವನ್ನು ನೀಡಲಾಗಿದೆ. ಅಲ್ಲಿಯ ತನಕ ಸಮಸ್ಯೆ ಪರಿಹಾರ ಕಾಣದಿದ್ದಲ್ಲಿ ಜು.19ರಂದು ಯುವಕರ ತಂಡದೊಂದಿಗೆ ಸೇರಿಕೊಂಡು ಉಡುಪಿ ನಗರ ಸಭೆ ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಧಿಕ್ಕಾರ ಎಂಬ ಬ್ಯಾನರ್ ಅಳವಡಿಸಿ ಶ್ರಮದಾನ ಮಾಡಲಾಗುವುದು. ಅದಕ್ಕೋಸ್ಕರ ಸುಮಾರು 40 ಜನರ ತಂಡವನ್ನು ರೂಪಿಸಲಾಗಿದೆ ಎಂದು ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.