ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಬಿಜೆಪಿಯೊಂದಿಗೆ ಸಚಿನ್ ಪೈಲಟ್ ಮಾತುಕತೆ; ವರದಿ
ಕಾಂಗ್ರೆಸ್ ಗೆ ಮಧ್ಯಪ್ರದೇಶದ ನಂತರ ರಾಜಸ್ಥಾನದಲ್ಲೂ ಸರಕಾರ ಉರುಳುವ ಭೀತಿ
ಹೊಸದಿಲ್ಲಿ, ಜು.12: ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯ ಎದ್ದ ಕಾರಣ ಮೂರು ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ತನ್ನ ನೇತೃತ್ವದ ಸರಕಾರವನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ರಾಜಸ್ಥಾನದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ರಾಜಸ್ಥಾನದಲ್ಲೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಶೀತಲ ಸಮರ ನಡೆಯುತ್ತಿದೆ.
ಸಿಎಂ ಜೊತೆ ಉತ್ತಮ ಸಂಬಂಧ ಹೊಂದಿಲ್ಲದ ಸಚಿನ್ ಪೈಲಟ್ ಇದೀಗ ಬಿಜೆಪಿ ಸೇರ್ಪಡೆಯ ಬಗ್ಗೆ ಮಾತುಕತೆ ಮಾತುಕತೆ ನಡೆಸುತ್ತಿದ್ದು, ತನ್ನ ಬಳಿ ಮೂವರು ಪಕ್ಷೇತರರು ಸೇರಿದಂತೆ 19 ಶಾಸಕರ ಬೆಂಬಲವಿದೆ ಎಂದು ಪೈಲಟ್ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾಕ್ಡೌನ್ಗಿಂತ ಮೊದಲೇ ಬಿಜೆಪಿ ಜೊತೆ ಪೈಲಟ್ ಚರ್ಚೆ ನಡೆಯುತ್ತಿದೆ. ಆದರೆ, ಬಿಜೆಪಿಯು ಪೈಲಟ್ಗೆ ಮುಖ್ಯಮಂತ್ರಿ ಪಟ್ಟ ನೀಡಲು ಸಿದ್ಧವಿಲ್ಲ. ಕೆಲವು ನಾಯಕರ ಪ್ರಕಾರ ಪೈಲಟ್ ಕಾಂಗ್ರೆಸ್ನ್ನು ತ್ಯಜಿಸಿ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
ಸರಕಾರವನ್ನು ಅಸ್ಥಿರಗೊಳಿಸಿದ ಆರೋಪದ ಮೇಲೆ ಸ್ಪೆಷಲ್ ಆಪರೇಶನ್ ಗ್ರೂಪ್ ತನ್ನನ್ನು ಪ್ರಶ್ನಿಸಿರುವುದಕ್ಕೆ ಪೈಲಟ್ ಅಸಮಾಧಾನಗೊಂಡಿದ್ದಾರೆ ಎಂದು ಪೈಲಟ್ರ ಆಪ್ತ ಮೂಲಗಳು ತಿಳಿಸಿವೆ.
ಅಶೋಕ್ ಗೆಹ್ಲೋಟ್ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುತ್ತಿರುವ ಗೃಹ ಸಚಿವಾಲಯದ ಮುಖ್ಯಸ್ಥರೂ ಆಗಿದ್ದು, ಪೈಲಟ್ಗೆ ಸಮನ್ಸ್ ನೀಡಿ ಪ್ರಶ್ನಿಸಲು ಆದೇಶಿಸಿದ್ದಾರೆ. ಗೆಹ್ಲೋಟ್ ಅವರ ಈ ಕ್ರಮದಿಂದು ಹೈಕಮಾಂಡ್ ಕೂಡ ಅಸಮಾಧಾನ ಹೊರಹಾಕಿದೆೆ ಎಂದು ಮೂಲಗಳು ತಿಳಿಸಿವೆ.
ಸಚಿನ್ ಪೈಲಟ್ ಇದೀಗ ತನ್ನ ಆಪ್ತರೊಂದಿಗೆ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹೈಕಮಾಂಡ್ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.