ಕೊರೋನ ಹರಡುವ ಭೀತಿ: ಉಡುಪಿ ಜಿಲ್ಲಾಸ್ಪತ್ರೆ ಸೀಲ್ಡೌನ್
ಉಡುಪಿ, ಜು.16: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ಓರ್ವ ನರ್ಸ್ ಹಾಗೂ ಇತರ ಇಬ್ಬರು ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಮೂರು ದಿನಗಳ ಕಾಲ ಸೀಲ್ಡೌನ್ ಮಾಲಾಗಿದೆ.
ಈ ಮೂಲಕ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ವೈರಸ್ ವ್ಯಾಪಕವಾಗಿ ಹರಡಿರುವ ಭೀತಿ ಎದುರಾಗಿದ್ದು, ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಬಂದ್ ಮಾಡಿ, ಒಳಗಿನಿಂದ ಸ್ಯಾನಿಟೈಸ್ ಮೂಲಕ ಶುಚಿಗೊಳಿಸಲಾಗುತ್ತಿದೆ. ತುರ್ತು ಚಿಕಿತ್ಸೆ, ಐಸೋಲೇಶನ್ ಹಾಗೂ ಫಿವರ್ ಕ್ಲಿನಿಕ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ತುರ್ತು ಚಿಕಿತ್ಸೆ ಹೊರತು ಪಡಿಸಿ ಸಾಮಾನ್ಯ ರೋಗಿಗಳ ಪ್ರವೇಶವನ್ನು ನಿಬಂರ್ಧಿಸಲಾಗಿದೆ. ಸದ್ಯ ಮೂರು ದಿನಳ ಕಾಲ ಬಂದ್ ಮಾಡಿ, ಇಡೀ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾೂ ರೋಗಿಗಳಿಗೆ ಪಾಸಿಟಿವ್ ಬಂದಿರುವುದರಿಂದ ಹಾಗೂ ಮುಂದೆ ವೈದ್ಯರಿಂದ ಸಾರ್ವಜನಿಕರಿಗೆ ಖಾಯಿಲೆ ಹರಡಬಾರದೆಂಬ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ತಿಳಿಸಿದ್ದಾರೆ.
ಆಸ್ಪತ್ರೆಯ ಉಳಿದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸದ್ಯ ಪಾಸಿಟಿವ್ ಬಂದ ರೋಗಿಗೆ ಪರೀಕ್ಷಿಸಿದ ವೈದ್ಯರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದರು.