ರಾಮಜನ್ಮಭೂಮಿ ನೇಪಾಳದಲ್ಲಿದೆ ಎಂದು ದೃಢಪಡಿಸಲು ಉತ್ಖನನ: ನೇಪಾಳ ಪುರಾತತ್ವ ಇಲಾಖೆ

ಕಾಠ್ಮಂಡು, ಜು.17: ರಾಮ ಹುಟ್ಟಿದ್ದು ಭಾರತದ ಅಯೋಧ್ಯೆಯಲ್ಲಿ ಅಲ್ಲ, ದಕ್ಷಿಣ ನೇಪಾಳದ ಥೋರಿ ಎಂಬಲ್ಲಿ ಎಂಬ ನೇಪಾಳದ ಪ್ರಧಾನಿಯ ಹೇಳಿಕೆಯನ್ನು ದೃಢಪಡಿಸಲು ಥೋರಿ ಪ್ರದೇಶದಲ್ಲಿ ಉತ್ಖನನ ಮತ್ತು ಅಧ್ಯಯನ ನಡೆಸಲಾಗುವುದು ಎಂದು ನೇಪಾಳದ ಪುರಾತನ ವಸ್ತು ಸಂಶೋಧನಾ ಇಲಾಖೆ ಹೇಳಿರುವುದಾಗಿ ವರದಿಯಾಗಿದೆ.
ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ. ನೇಪಾಳದ ಬಿರ್ಗುಂಜ್ ಬಳಿಯ ಥೋರಿ ಎಂಬಲ್ಲಿ ರಾಮ ಜನಿಸಿದ್ದಾನೆ ಎಂದು ಪ್ರಧಾನಿ ಕೆಪಿ ಶರ್ಮ ಒಲಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ಅವರ ಸಚಿವ ಸಂಪುಟದ ಹಲವು ಸದಸ್ಯರೇ ಆಕ್ಷೇಪ ಸೂಚಿಸಿದ ಹಿನ್ನೆಲೆಯಲ್ಲಿ, ಇದೀಗ ವಿವಿಧ ಇಲಾಖೆಗಳ ಸಹಯೋಗದಲ್ಲಿ ಥೋರಿ ಪ್ರದೇಶದಲ್ಲಿ ಉತ್ಖನನ ನಡೆಸಲು ಪುರಾತತ್ವ ಇಲಾಖೆ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೀರ್ಗುಂಜ್ ಬಳಿಯ ಥೋರಿಯಲ್ಲಿ ಉತ್ಖನನ ನಡೆಸುವ ವಿಷಯಕ್ಕೆ ಆದ್ಯತೆ ನೀಡಿದ್ದು, ಈ ಬಗ್ಗೆ ಹಲವು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಇಲಾಖೆಯ ವಕ್ತಾರ ರಾಮ್ಬಹಾದುರ್ ಕನ್ವರ್ ಹೇಳಿದ್ದಾರೆ.
“ಆದರೆ ಈ ಪ್ರದೇಶದಲ್ಲಿ ಉತ್ಖನನ ನಡೆಸಲು ಯಾವುದೇ ಆಧಾರವಿಲ್ಲ. ನಮ್ಮ ಪ್ರಧಾನಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉತ್ಖನನ ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಈ ಬಗ್ಗೆ ಇಲಾಖೆಯು ತಜ್ಞರೊಂದಿಗೆ ಸಮಾಲೋಚನೆ ಮುಂದುವರಿಸಿದೆ. ಆದರೆ ಅಯೋಧ್ಯೆ ನೇಪಾಳದಲ್ಲಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ನನಗನಿಸುವುದಿಲ್ಲ” ಎಂದು ಪುರಾತತ್ವ ಇಲಾಖೆಯ ಪ್ರಧಾನ ನಿರ್ದೇಶಕ ದಾಮೋದರ್ ಗೌತಮ್ ಹೇಳಿದ್ದಾರೆ.
ರಾಮನ ಬಗ್ಗೆ ಮತ್ತು ರಾಮನ ಜನ್ಮಸ್ಥಳದ ಬಗ್ಗೆ ಹಲವು ನಂಬಿಕೆಗಳಿರುವ ಕಾರಣ, ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವ ವಿಶಾಲ ಸಾಂಸ್ಕೃತಿಕ ಭೌಗೋಳಿಕತೆಯ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ ಅಗತ್ಯ ಎಂಬುದು ಪ್ರಧಾನಿ ಒಲಿ ಹೇಳಿಕೆಯ ಅರ್ಥವಾಗಿದೆ ಎಂದು ನೇಪಾಳದ ವಿದೇಶ ವ್ಯವಹಾರ ಸಚಿವಾಲಯ ಸ್ಪಷ್ಟನೆ ನೀಡಿದೆ.







