ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕರ್ನಾಟಕದ ರವಿ ಮಳೀಮಠ ನೇಮಕ

ಬೆಂಗಳೂರು, ಜು.17: ಉತ್ತರಾಖಂಡ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಆಗಿ ಕರ್ನಾಟಕದ ರವಿ ಮಳೀಮಠ ಅವರು ನೇಮಕವಾಗಿದ್ದಾರೆ. ಈ ಹಿಂದೆ ಅವರು ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.
ಕೇಂದ್ರ ಸರಕಾರದ ಆದೇಶದಂತೆ ಜು.28ರಿಂದ ಕರ್ನಾಟಕದ ನ್ಯಾಯಮೂರ್ತಿ ರವಿ ಮಳೀಮಠ ಅವರು ಉತ್ತರಾಖಂಡ ಹೈಕೋರ್ಟ್ ನ ಸಿಜೆ ಆಗಿ ಸೇವೆ ಆರಂಭಿಸಲಿದ್ದಾರೆ. ಪ್ರಸ್ತುತ ಉತ್ತರಾಖಂಡ ಹೈಕೋರ್ಟ್ ನ ಸಿಜೆ ಆಗಿರುವ ರಮೇಶ್ ರಂಗನಾಥನ್ ಅವರು ಜು.28ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಯಾಗಿರುವ ರವಿ ಮಳೀಮಠ ಅವರನ್ನು ನೇಮಿಸಲಾಗಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ನ್ಯಾ.ರವಿ. ಮಳೀಮಠ ಅವರನ್ನು ಸಿಜೆಯಾಗಿ ನೇಮಿಸುವ ಕುರಿತು ಫೆ.12ರಂದು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ರಾಜ್ಯ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳೀಮಠ ಅವರ ಪುತ್ರರಾಗಿರುವ ನ್ಯಾ.ರವಿ.ಮಳೀಮಠ ಅವರು 1987ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು. 2008ರಲ್ಲಿ ರಾಜ್ಯ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಇವರು, 2010ರಲ್ಲಿ ಪೂರ್ಣಾವಧಿ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದ್ದರು.







