ಕೊರೋನ ಮಣಿಸಲು ಕೇಂದ್ರದಿಂದ ರಾಜ್ಯಕ್ಕೆ ಎಲ್ಲ ನೆರವು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
![ಕೊರೋನ ಮಣಿಸಲು ಕೇಂದ್ರದಿಂದ ರಾಜ್ಯಕ್ಕೆ ಎಲ್ಲ ನೆರವು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೊರೋನ ಮಣಿಸಲು ಕೇಂದ್ರದಿಂದ ರಾಜ್ಯಕ್ಕೆ ಎಲ್ಲ ನೆರವು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ](https://www.varthabharati.in/sites/default/files/images/articles/2020/07/17/251448-1595009832.jpg)
ಬೆಂಗಳೂರು, ಜು. 17: ಕೊರೋನ ಮಹಾಮಾರಿಯನ್ನು ಮಣಿಸಲು ರಾಜ್ಯ ಸರಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಎಲ್ಲ ನೆರವು ನೀಡುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಮಹಾಮಾರಿ ನಿಯಂತ್ರಸುವ ಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ನಡೆಸಿದ ಸಚಿವರು, ಸಂಸದರು ಮತ್ತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಕೊರೋನ ವಿರುದ್ಧದ ಹೋರಾಟದ ವಿಚಾರವಾಗಿ ಕೇಂದ್ರವು ರಾಜ್ಯದೊಂದಿಗೆ ಸತತ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡುತ್ತಿದೆ. ಇನ್ನೂ ಏನೆಲ್ಲ ಅಗತ್ಯವೋ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ಔಷಧೋದ್ಯಮವೂ ನನ್ನ ಇಲಾಖೆಯ ಅಧೀನದಲ್ಲಿಯೇ ಬರುತ್ತದೆ. ಹಾಗಾಗಿ ನಾನು ಪ್ರತಿದಿನ ಖುದ್ದಾಗಿ ಔಷಧ ಉತ್ಪಾದನೆ, ವಿತರಣೆ ಹೇಗಾಗುತ್ತಿದೆ ಎಂದು ಪರಿಶೀಲಿಸುತ್ತೇನೆ. ಈ ವಿಚಾರದಲ್ಲಿ ಸದಾ ನಿಗಾ ಇಡಲಾಗುತ್ತದೆ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಹೈಡ್ರೊಕ್ಸಿಕ್ಲೋರೊಕ್ವಿನ್, ಪೆರಾಸೆಟಾಮೊಲ್ ಮುಂತಾದ ಔಷಧಗಳು ಸಾಕಷ್ಟು ದಾಸ್ತಾನಿದೆ. ಹಾಗೆಯೇ ದೇಶಾದ್ಯಂತ ಇರುವ ನಮ್ಮ ಇಲಾಖೆಯ ಜನೌಷಧಿ ಕೇಂದ್ರಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಜೀವರಕ್ಷಕ ಔಷಧಗಳು ಲಭ್ಯವಿವೆ. ಕರ್ನಾಟಕ ರಾಜ್ಯವೊಂದರಲ್ಲೇ 600ಕ್ಕಿಂತ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸದಾನಂದ ಗೌಡ ಹೇಳಿದರು.
ಔಷಧಗಳ ಕೊರತೆ, ಕಾಳಸಂತೆಯಂತಹ ಏನಾದರು ದೂರುಗಳಿದ್ದರೆ ನಮ್ಮ ಜನೌಷಧಿ ಸಹಾಯವಾಣಿ ಸಂಖ್ಯೆ-18001808080 ಅಥವಾ ಎನ್ಪಿಪಿಎ ಸಹಾಯವಾಣಿ 18001112550/011-23345118/011-23345122 ನಂಬರುಗಳಿಗೆ ಕರೆ ಮಾಡಬಹುದು. ಅಥವಾ ಖುದ್ದು ನನ್ನ ಗಮನಕ್ಕೂ ತರಬಹುದು. ಏನೇ ಸಮಸ್ಯೆಯಿದ್ದರೂ ಅದನ್ನು ಇತ್ಯರ್ಥಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಅದೇ ರೀತಿ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳು ತುರ್ತು ಔಷಧ, ವೈದ್ಯಕೀಯ ಉಪಕರಣಗಳ ಆಮದು ಮಾಡಿಕೊಳ್ಳುವ ವಿಚಾರವಾಗಿ ತೊಡಕುಗಳು ಇದ್ದರೆ ನಮ್ಮ ಇಲಾಖೆಯ ಅಥವಾ ನನ್ನ ಗಮನಕ್ಕೆ ತರಬಹುದು. ಅಗತ್ಯ ಅನುಮತಿಯನ್ನು ಸ್ವಲ್ಪವೂ ವಿಳಂಬವಿಲ್ಲದೆ ದೊರಕಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಮಹಾಮಾರಿ ಕೊರೋನ ರೋಗವು ಜಗತ್ತಿನ ಆರೋಗ್ಯ, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ನಾವೆಲ್ಲ ಒಟ್ಟಾಗಿ ಸಂಘಟಿತ ಪ್ರಯತ್ನ ಮಾಡಿದಾಗಲೇ ಇದನ್ನು ಮಣಿಸಲು ಸಾಧ್ಯ. ಸಾರ್ವಜನಿಕರೂ ಈ ಹೋರಾಟದಲ್ಲಿ ಕೈಜೋಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು, ವೈದ್ಯರು ಸೇರಿದಂತೆ ಕೊರೋನ ಯೋಧರ ಜತೆ ಎಲ್ಲ ರೀತಿಯಿಂದ ಸಹಕರಿಸಿ ಎಂದು ವಿನಂತಿಸುತ್ತೇನೆ ಎಂದು ಸದಾನಂದ ಗೌಡ ತಿಳಿಸಿದರು.