ಮನೆ ಬಾಗಿಲಿಗೆ ರ್ಯಾಪಿಡ್ ಟೆಸ್ಟ್: ಬಿಬಿಎಂಪಿ ಮೇಯರ್ ಮೇಯರ್ ಗೌತಮ್ ಕುಮಾರ್ ಚಾಲನೆ
![ಮನೆ ಬಾಗಿಲಿಗೆ ರ್ಯಾಪಿಡ್ ಟೆಸ್ಟ್: ಬಿಬಿಎಂಪಿ ಮೇಯರ್ ಮೇಯರ್ ಗೌತಮ್ ಕುಮಾರ್ ಚಾಲನೆ ಮನೆ ಬಾಗಿಲಿಗೆ ರ್ಯಾಪಿಡ್ ಟೆಸ್ಟ್: ಬಿಬಿಎಂಪಿ ಮೇಯರ್ ಮೇಯರ್ ಗೌತಮ್ ಕುಮಾರ್ ಚಾಲನೆ](https://www.varthabharati.in/sites/default/files/images/articles/2020/07/18/251454-1595011533.jpg)
ಬೆಂಗಳೂರು, ಜು.17: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಂಟೈನ್ಮೆಂಟ್ ಪ್ರದೇಶ, ಕೊಳಗೇರಿ ಪ್ರದೇಶ ಹಾಗೂ ಪೌರಕಾರ್ಮಿಕರ ಕಾಲನಿಗಳಲ್ಲಿ ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೊರೋನ ಪರೀಕ್ಷೆ ನಡೆಸುವ ಕಾರ್ಯಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಚಾಲನೆ ನೀಡಿದರು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದ್ದು, ಜನಸಂದಣಿ ಮತ್ತು ಇಕ್ಕಟ್ಟಾದ ಪ್ರದೇಶಗಳಲ್ಲಿ ಕೊರೋನ ಸೋಂಕು ತೀವ್ರವಾಗಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕೊಳಗೇರಿ, ಪ್ರದೇಶ ಕಂಟೈನ್ಮೆಂಟ್ ಪ್ರದೇಶ, ಪೌರಕರ್ಮಿಕರ ಕಾಲನಿಗಳು ಹಾಗೂ ತೀರ ಉಸಿರಾಟ ತೊಂದರೆ ಮತ್ತು ಶೀತ ಜ್ವರದ ಲಕ್ಷಣಗಳು ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ಮೂರು ಜನ ಸಿಬ್ಬಂದಿ ನೇಮಕ: ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಗೆ ಹೋಗುವ ಸಿಬ್ಬಂದಿಗೆ ವಲಯವಾರು ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಾಹನದಲ್ಲಿ ಒಬ್ಬ ಲ್ಯಾಬ್ ಟೆಕ್ನಿಷಿಯನ್, ಕಿರಿಯ ಆರೋಗ್ಯ ಸಿಬ್ಬಂದಿ ಹಾಗೂ ಒಬ್ಬರು ಸಹಾಯಕ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿನಿತ್ಯ ಪರೀಕ್ಷೆ ನಡೆಸಿದ ಅಂಕಿ ಅಂಶಗಳನ್ನು ಐಸಿಎಂಆರ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಮೇಯರ್ ಮಾಹಿತಿ ನೀಡಿದರು.
ಉಪ ಮೇಯರ್ ರಾಮಮೋಹನ ರಾಜು, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್ ರಾಜು, ಮಾನ್ಯ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.
ರ್ಯಾಪಿಡ್ ಟೆಸ್ಟ್ ಗೆ 232 ಓಲಾ ಕಾರು ನಿಯೋಜನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ವಾರ್ಡ್ಗಳಲ್ಲಿ ಮನೆ-ಮನೆ ಸಮೀಕ್ಷೆ ಕೈಗೊಂಡು ಕೋವಿಡ್-19 ಲಕ್ಷಣಗಳಿರುವ ಸಾರ್ವಜನಿಕರಿಗೆ ರಾಪಿಡ್ ಟೆಸ್ಟ್ ಮಾಡಲು ಪೂರ್ವ ವಲಯಕ್ಕೆ 40, ಪಶ್ಚಿಮ ವಲಯಕ್ಕೆ 40, ದಕ್ಷಿಣ ವಲಯಕ್ಕೆ 35, ಬೊಮ್ಮನಹಳ್ಳಿ 20, ದಾಸರಹಳ್ಳಿ 12, ಯಲಹಂಕ 15, ಆರ್.ಆರ್. ನಗರ 20, ಮಹದೇವಪುರ ವಲಯಕ್ಕೆ 20 ಹಾಗೂ ಬೆಂಗಳೂರು ನಗರ ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶಗಳಿವೆ 12 ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ವಲಯ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ವಾಹನಗಳು ಕಾರ್ಯ ನಿರ್ವಹಿಸಲಿವೆ.
ಮನೆಬಾಗಿಲಲ್ಲೇ ಕೊರೋನ ಪರೀಕ್ಷೆ
ನಗರದಲ್ಲಿ ಕೊರೋನ ಹರಡದಂತೆ ಲಾಕ್ಡೌನ್ ಮಾಡಲಾಗಿದ್ದು, ಹಿರಿಯ ನಾಗರಿಕರು, ಸೋಂಕಿನ ಲಕ್ಷಣಗಳಿರುವವರು, ಪ್ರಾಥಮಿಕ ಸಂಪರ್ಕದಲ್ಲಿದ್ದವರು ತಮ್ಮ ಮನೆಬಾಗಿಲಲ್ಲೇ ಪರೀಕ್ಷೆ ಮಾಡಿಸಿಕೊಳ್ಳಲು ಸಹಾಯವಾಣಿ ಆರಂಭಿಸಿದೆ. ಕೊರೋನ ಪರೀಕ್ಷೆಗೆ ಗಂಟಲು ದ್ರವ ಕೊಟ್ಟ ಜನರು, ಪರೀಕ್ಷಾ ವರದಿ ಬರುವವರೆಗೂ ಹೋಮ್ ಕ್ವಾರಂಟೈನ್ನಲ್ಲಿರಬೇಕು. ನಿಯಮ ಉಲ್ಲಂಘಿಸಿದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವಲಯವಾರು ಸಹಾಯವಾಣಿ:
ಯಲಹಂಕ-080-28560696/ 8792032820/5180, ಮಹದೇವಪುರ-080-23010101/102, ಬೊಮ್ಮನಹಳ್ಳಿ-8548883334/ 8970002228, ಆರ್.ಆರ್ ನಗರ-080-2600208, ದಕ್ಷಿಣ ವಲಯ-7022724772, ಪೂರ್ವ ವಲಯ-9900094042, ಪಶ್ಚಿಮ ವಲಯ 080-68248454/7204179723.
![](https://www.varthabharati.in/sites/default/files/images/galllery/2020/07/18/17BNP (3).jpg)