ಭಾಷಾ ವಿಜ್ಞಾನಿ, ಜಾನಪದ ವಿದ್ವಾಂಸ ಡಾ.ಯು.ಪಿ.ಉಪಾಧ್ಯಾಯರ ಪರಿಚಯ

ಉಡುಪಿ, ಜು.18: ನಾಡಿನ ಖ್ಯಾತನಾಮ ಭಾಷಾ ವಿಜ್ಞಾನಿ, ಜಾನಪದ, ಬಹುಭಾಷಾ ವಿದ್ವಾಂಸ, ಸಂಶೋಧಕ ಹಾಗೂ ಆರು ಸಂಪುಟಗಳಲ್ಲಿ ಹೊರ ಬಂದ ಬೃಹತ್ ತುಳು ನಿಘಂಟಿನ ಮುಖ್ಯ ಸಂಪಾದಕ ಡಾ.ಯು.ಪಿ. ಉಪಾಧ್ಯಾಯ (ಉಳಿಯಾರು ಪದ್ಮನಾಭ ಉಪಾಧ್ಯಾಯ) ಶುಕ್ರವಾರ ರಾತ್ರಿ 11:30ರ ಸುಮಾರಿಗೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಾಪು ತಾಲೂಕು ಮಜೂರು ಗ್ರಾಮದ ಉಳಿಯಾರು ನಿವಾಸಿಯಾದ ಡಾ.ಉಪಾಧ್ಯಾಯರಿಗೆ 88 ವರ್ಷ ಪ್ರಾಯವಾಗಿದ್ದು, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ತುಳು ಜಾನಪದ ಹಾಗೂ ಭಾಷಾ ಸಂಶೋಧಕಿಯಾಗಿದ್ದು, ಇವರೊಂದಿಗೆ ಪ್ರತಿಯೊಂದು ಕ್ಷೇತ್ರ ಕಾರ್ಯದಲ್ಲಿ ಜೊತೆಯಾಗಿ ದುಡಿದ ಪತ್ನಿ ಡಾ.ಸುಶೀಲಾ ಉಪಾಧ್ಯಾಯ (77) 2014ರ ಜನವರಿಯಲ್ಲಿ ನಿಧನರಾಗಿದ್ದರು.
ಡಾ.ಯು.ಪಿ.ಉಪಾಧ್ಯಾಯರು ಸಂಸ್ಕೃತ, ಕನ್ನಡ ಹಾಗೂ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಳನ್ನೂ, ಭಾಷಾ ವಿಜ್ಞಾನದಲ್ಲಿ ಪಿಎಚ್ಡಿ ಪದವಿಯನ್ನೂ, ಹಿಂದಿಯಲ್ಲಿ ವಿದ್ವಾನ್ ಪದವಿಯನ್ನೂ, ಫ್ರೆಂಚ್ ಭಾಷೆಯಲ್ಲಿ ಡಿಪ್ಲೋಮಾ ಪದವಿಯನ್ನೂ ಗಳಿಸಿದ್ದರು. ಬಹುಭಾಷಾ ವಿಶಾರದರಾಗಿದ್ದ ಇವರು ಕನ್ನಡ, ತುಳು, ಹಿಂದಿ, ಇಂಗ್ಲೀಷ್, ಮಲಯಾಳಂ, ತಮಿಳು, ಫ್ರೆಂಚ್ ಹಾಗೂ ಆಫ್ರಿಕನ್ ಭಾಷೆಗಳಲ್ಲಿ ಪ್ರಭುತ್ವವನ್ನು ಹೊಂದಿದ್ದರು.
ತಿರುವಾಂಕೂರು ರಾಜನ ದರ್ಬಾರಿನಲ್ಲಿ ವಿದ್ವಾಂಸರಾಗಿದ್ದ ಪೌರೋಹಿತ್ಯ ಕುಟುಂಬದ ಸೀತಾರಾಮ ಉಪಾಧ್ಯಾಯರ ಪುತ್ರರಾಗಿ ಮಜೂರು ಗ್ರಾಮದ ಉಳಿಯಾರದಲ್ಲಿ 1932ರ ಎ.10ರಂದು ಜನಿಸಿದ ಪದ್ಮನಾಭ ಉಪಾಧ್ಯಾಯ, ಮದರಾಸಿನ ಪ್ರಾಚ್ಯ ಸಂಶೋಧನಾಲಯ, ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜು, ಪುಣೆಯ ಡೆಕ್ಕನ್ ಕಾಲೇಜು ಸಂಶೋಧನ ಕೇಂದ್ರ, ಮೈಸೂರಿನ ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನ, ಅಮೆರಿಕದ ಶಾಂತಿದಳ ಮುಂತಾದ ಸಂಸ್ಥೆಗಳಲ್ಲಿ 15 ವರ್ಷಗಳ ಕಾಲ ಪ್ರಾಧ್ಯಾಪಕ, ಪ್ರಾಂಶುಪಾಲರ ಹುದ್ದೆಗಳಲ್ಲಿ ದುಡಿದ ಬಳಿಕ ಪಶ್ಚಿಮ ಆಫ್ರಿಕಾದ ಸೆನೆಗಲ್ನ ಡಕಾರ್ ವಿಶ್ವವಿದ್ಯಾಲಯದಲ್ಲಿ ಎಂಟು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಲಂಡನ್ ಹಾಗೂ ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕ ರಾಗಿಯೂ ಕಾರ್ಯನಿರ್ವಹಿಸಿದ ಡಾ.ಉಪಾಧ್ಯಾಯ ಕೊನೆಗೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕರಾಗಿ, ತುಳು ನಿಘಂಟಿನ ಪ್ರಧಾನ ಸಂಪಾದಕರಾಗಿ ದುಡಿದರು.
ಸಂಶೋಧನ ಕೃತಿಗಳು ಹಲವು: ಆಂಗ್ಲ ಭಾಷೆಯಲ್ಲಿ ಪ್ರಕಟವಾದ ಇವರ ಕನ್ನಡದ ಉಪಭಾಷೆಗಳ ತೌಲನಿಕ ಅಧ್ಯಯನ, ಕನ್ನಡ ಧ್ವನಿ ವಿಜ್ಞಾನ, ಕನ್ನಡ ಪ್ರಾದೇಶಿಕ ರೂಪಗಳು, ದ್ರಾವಿಡ ಹಾಗೂ ನಿಗ್ರೋ ಭಾಷೆ ಹಾಗೂ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ, ಕನ್ನಡ, ಸಂಸ್ಕೃತ, ತಮಿಳು ಭಾಷೆಗಳನ್ನು ವಿದೇಶಿಯರಿಗೆ ಕಲಿಸಲು ತಯಾರಿಸಿದ ಆಕರ ಗ್ರಂಥಗಳು, ಸಂಶೋಧನಾ ಬರಹಗಳು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿವೆ.
ತುಳು ನಿಘಂಟು: ಡಾ.ಉಪಾಧ್ಯಾಯ ಸುಮಾರು 18 ವರ್ಷಗಳ ಕಾಲ ಹಗಲಿರುಳು ಶ್ರಮಿಸಿ ತುಳುಭಾಷೆಗೆ ಆರು ಬೃಹತ್ ಸಂಪುಟಗಳಲ್ಲಿ ನೀಡಿದ 3,400ಪುಟಗಳ ತುಳು ನಿಘಂಟು ಮೂಲಕ ತುಳು ಭಾಷೆಗೆ, ಶಬ್ದಕೋಶಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ತುಳು ಜಾನಪದ ಕ್ಷೇತ್ರದಲ್ಲೂ ಸಂಶೋಧನೆ ನಡೆಸಿ ‘ಭೂತ ವರ್ಶಿಪ್’, ‘ಫೋಕ್ ಎಪಿಕ್ ಆಫ್ ತುಳುನಾಡು’, ‘ಕೋಸ್ಟಲ್ ಕರ್ನಾಟಕ’ ಮುಂತಾದ ಗ್ರಂಥಗಳ ಮೂಲಕ ತೌಳವ ಸಂಸ್ಕೃತಿಯ ಹಿರಿಮೆಯನ್ನು ದೇಶ-ವಿದೇಶಗಳಲ್ಲೂ ಪಸರಿಸಲು ನೆರವಾಗಿದ್ದರು.
ಅಲ್ಲದೇ ಇವರು ತುಳು ಕಲಿಕೆಗಾಗಿ ‘ತುಳು ಕೈಪಿಡಿ’ ಎಂಬ ಗ್ರಂಥವನ್ನು, ತುಳು ನಿಘಂಟಿನ ಸಂಕ್ಷಿಪ್ತರೂಪವಾದ ‘ತುಳು ಕಿಸೆಕೋಶ’ವನ್ನೂ ರಚಿಸಿದ್ದಾರೆ. ಡಾ.ಉಪಾಧ್ಯಾಯರ 20 ಬೃಹತ್ ಗ್ರಂಥಗಳು ಹಾಗೂ ನೂರಾರು ಲೇಖನಗಳು ಪ್ರಕಟವಾಗಿವೆ. ನಾಡಿನ ಹಲವಾರು ಪಿಎಚ್ಡಿ ಮಟ್ಟದ ಸಂಶೋಧಕರಿಗೆ ಇವರು ಮಾರ್ಗದರ್ಶಕರಾಗಿ ಕಾರ್ಯವನ್ನೂ ನಿರ್ವಹಿಸಿದ್ದಾರೆ. ದೇಶದ ವಿವಿಧ ವಿವಿಗಳಲ್ಲಿ ಪಿಎಚ್ಡಿ, ಎಂಫಿಲ್ ಅಭ್ಯರ್ಥಿಗಳ ಪರೀಕ್ಷಕರಾಗಿಯೂ ನಿಯುಕ್ತಿಗೊಂಡಿದ್ದರು.
ಪ್ರಶಸ್ತಿಗಳು: ಭಾಷಾ ವಿಜ್ಞಾನ, ಜಾನಪದ ಹಾಗೂ ಸಂಶೋಧನ ಕ್ಷೇತ್ರದಲ್ಲಿ ಡಾ.ಯು.ಪಿ.ಉಪಾಧ್ಯಾಯ ಸಲ್ಲಿಸಿದ ಅನುಪಮ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾರಂತ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಂ.ಭಾ, ಜೋಷಿ ಪ್ರಶಸ್ತಿ, ದ್ರಾವಿಡ ಭಾಷಾ ವಿಜ್ಞಾನ ಪರಿಷತ್ತಿನ ‘ಗುಂಡರ್ಟ್ ಪ್ರಶಸ್ತಿ’, ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಲಭಿಸಿವೆ.
ಸಿದ್ಧಿ ಸಮಾಧಿ ಯೋಗದ ಶಿಕ್ಷಕರಾಗಿ ಜನತೆಯ ಆರೋಗ್ಯ ಹಾಗೂ ನೈತಿಕ ಸುಧಾರಣೆಗಾಗಿ ಇವರು ಶ್ರಮಿಸಿದ್ದಾರೆ. ಪೌರೋಹಿತ್ಯ ಸಂಪ್ರದಾಯವನ್ನೂ ಬಲ್ಲವರಾಗಿದ್ದ ಡಾ.ಉಪಾಧ್ಯಾಯ, ಉಳಿಯಾರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸಿದ್ದರು.







