ಜನಸಾಮಾನ್ಯರ ನಡುವೆ ಕೊರೋನ ಹೆಚ್ಚಳ: ಸಚಿವ ಕೋಟ ಆತಂಕ
ರಾಜ್ಯದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಅಭಿಜ್ಞಾ ರಾವ್ ಗೆ ಸನ್ಮಾನಿಸಿದ ಸಚಿವ
ಉಡುಪಿ, ಜು.18: ಇಂದು ಜನಸಾಮಾನ್ಯರ ನಡುವೆ ಕೊರೋನ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಲು ಇಲಾಖೆಯನ್ನು ಸನ್ನದ್ಧಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುವುದು, ಜನರಿಗೆ ಸರಿಯಾದ ಚಿಕಿತ್ಸೆ ನೀಡುವುದು ಮತ್ತು ಜನರಲ್ಲಿ ಅನಗತ್ಯ ಭೀತಿ ಮೂಡದಂತೆ ನೋಡಿಕೊಳ್ಳುವುದಾಗಿದೆ. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಕೊರೋನ ವಿರುದ್ಧ ಗೆಲ್ಲಲು ಜನ ಸಹಕರಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಉಡುಪಿಯ ಅಭಿಜ್ಞಾ ರಾವ್ ಅವರನ್ನು ಇಂದು ಅವರ ನಿವಾಸದಲ್ಲಿ ಸನ್ಮಾನಿಸಿದ ಬಳಿಕ ಅವರು ಮಾಧ್ಯಮವರೊಂದಿಗೆ ಮಾತನಾಡುತ್ತಿದ್ದರು.
ತಾನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನು ಭೇಟಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳ ಗುರಿಯೊಂದಿಗೆ ಕೊರೋನ ನಿಯಂತ್ರಿಸುವ ಕುರಿತು ಚರ್ಚೆ ಮಾಡಿದ್ದೇನೆ. ಎಲ್ಲ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳನ್ನು ಸುಸಜ್ಜಿತವಾಗಿ ಇಡಲಾಗಿದೆ. ಕೊರೋನಾವನ್ನು ಜನಜಾಗೃತಿ ಮೂಲಕ ನಿಯಂತ್ರಣಕ್ಕೆ ತರುವ ಬಗ್ಗೆ ಸರಕಾರಕ್ಕೆ ವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಾನ್ ಕಟ್ಟಿಮನಿ, ಗಿರೀಶ್ ಕುಲಕರ್ಣಿ, ವಿದ್ಯೋದಯ ಕಾಲೇಜಿನ ಪ್ರಾಂಶುಪಾಲ ಎ.ಎಲ್.ಛಾತ್ರ, ನಗರಸಭೆ ಸದಸ್ಯೆ ರಜನಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.