ಉಡುಪಿ: ಜಿಲ್ಲೆಯಲ್ಲಿ ಬಿರುಸಿನ ಮಳೆ, ಅಪಾರ ಹಾನಿ
ಉಡುಪಿ, ಜು.18: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಶುಕ್ರವಾರ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಭೋಜ ಸಾಲ್ಯಾನ್ ಎಂಬವರ ಬೆಳೆ ಭಾರೀ ಮಳೆಯಿಂದ ಹಾನಿಗೀಡಾಗಿದೆ. ಅವರಿಗೆ 30 ಸಾವಿರ ರೂ.ಗಳಿಗೂ ಅಧಿಕ ನಷ್ಟವಾದ ಬಗ್ಗೆ ಅಂದಾಜಿಸಲಾಗಿದೆ.
ಗಂಗೊಳ್ಳಿಯಲ್ಲಿ ಗುರುವಾರ ರಾತ್ರಿ ಭಾರೀ ಮಳೆಗೆ ಮಧುಕರ ನಾಯಕ್ ಎಂಬವರ ಮನೆ ಸಂಪೂರ್ಣ ಕುಸಿದುಬಿದ್ದಿದ್ದು ಇದರಿಂದ ಮೂರು ಲಕ್ಷ ರೂ. ನಷ್ಟವಾಗಿದೆ. ಉಡುಪಿ ತಾಲೂಕಿನ ಮಣಿಪುರ ಗ್ರಾಮದ ಜನಾರ್ದನ ಆಚಾರ್ಯರ ಮನೆಗೆ ಭಾಗಶ: ಹಾನಿಯಾಗಿದ್ದು 22,000 ನಷ್ಟವಾಗಿದೆ.
ಗಾಳಿ-ಮಳೆಗೆ ಕಾರ್ಕಳ ತಾಲೂಕು ಕುಕ್ಕಂದೂರು ಗ್ರಾಮದ ಕೆ.ಗೋಪ ಪೂಜಾರಿ ಮನೆಗೆ 30ಸಾವಿರರೂ., ರಮಾನಂದ ಪೂಜಾರಿ ಮನೆಗೆ 35,000, ಬ್ರಹ್ಮಾವರ ತಾಲೂರಕು ಹೊಸೂರು ಗ್ರಾಮದ ಮುದ್ದು ನಾಯ್ಕರ ಮನೆಗೆ 20 ಸಾವಿರ ರೂ., ಹಲುವಳ್ಳಿ ಗ್ರಾಮದ ಅನಂತ ಮರಕಾಲ ಮನೆಗೆ 50 ಸಾವಿರ ರೂ., ಹಾವಂಜೆ ಗ್ರಾಮದ ಸುಂದರ ಪೂಜಾರಿ ಮನೆಗೆ 60 ಸಾವಿರ ರೂ., ಕಾಡೂರು ಗ್ರಾಮದ ಸೀತಾರಾಮ ನಾಯ್ಕರ ಮನೆಗೆ ಸಿಡಿಲು ಬಡಿದು 50 ಸಾವಿರ ರೂ. ಹಾಗೂ ಹೇರೂರು ಗ್ರಾಮದ ಜಯರಾಮ ಶೆಟ್ಟಿ ಮನೆಗೆ ಒಂದೂವರೆ ಲಕ್ಷ ರೂ.ಹಾನಿಯಾದ ಬಗ್ಗೆ ವರದಿಗಳು ಬಂದಿವೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 90ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 93ಮಿ.ಮೀ, ಕುಂದಾಪುರದಲ್ಲಿ 80ಮಿ.ಮೀ. ಹಾಗೂ ಕಾರ್ಕಳದಲ್ಲಿ 98ಮಿ.ಮೀ. ಮಳೆ ಸುರಿದ ಬಗ್ಗೆ ವರದಿಯಾಗಿದೆ.