ಬೆಂಗಳೂರು: ಕೊರೋನಗೆ ಮತ್ತೆ 49 ಮಂದಿ ಮೃತ, 2125 ಮಂದಿಗೆ ಸೋಂಕು ದೃಢ
![ಬೆಂಗಳೂರು: ಕೊರೋನಗೆ ಮತ್ತೆ 49 ಮಂದಿ ಮೃತ, 2125 ಮಂದಿಗೆ ಸೋಂಕು ದೃಢ ಬೆಂಗಳೂರು: ಕೊರೋನಗೆ ಮತ್ತೆ 49 ಮಂದಿ ಮೃತ, 2125 ಮಂದಿಗೆ ಸೋಂಕು ದೃಢ](https://www.varthabharati.in/sites/default/files/images/articles/2020/07/18/251571-1595094385.gif)
ಬೆಂಗಳೂರು, ಜು.18: ನಗರದಲ್ಲಿ ಶನಿವಾರ ಒಂದೇ ದಿನಕ್ಕೆ 2,125 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿಗೆ 49 ಜನರು ಮೃತರಾಗಿದ್ದು, 332 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 29,621ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 22,449 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ನಗರದಲ್ಲಿ 631 ಜನರು ಸೋಂಕಿಗೆ ಬಲಿಯಾಗಿದ್ದು, 6540 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಶನಿವಾರ ಕೂಡ 250 ಜನರು ಗುಣಮುಖರಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 28,951 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಖಾಸಗಿ ಆಸ್ಪತ್ರೆ ವಿರುದ್ಧ ಪಾಲಿಕೆ ಆಕ್ರೋಶ
ಕೊರೋನ ಸೋಂಕಿತರನ್ನ ಆಸ್ಪತ್ರೆಗೆ ಸ್ಥಳಾಂತರಿಸುವುದಕ್ಕೆ ತಡವಾಗಲು ಖಾಸಗಿ ಲ್ಯಾಬ್ ಮತ್ತು ಖಾಸಗಿ ಆಸ್ಪತ್ರೆಗಳೇ ಕಾರಣವೆಂದು ಬಿಬಿಎಂಪಿ ಆರೋಪಿಸಿದೆ. ಖಾಸಗಿ ಲ್ಯಾಬ್ಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಕೋವಿಡ್ ಟೆಸ್ಟ್ ವರದಿ ಬಂದ ತಕ್ಷಣ ಐಸಿಎಂಆರ್ ವೆಬ್ಸೈಟ್ಗೆ ಅಪ್ಡೇಟ್ ಮಾಡಬೇಕು. ಆದರೆ ಅದಕ್ಕೂ ಮುನ್ನ ಇವರು ರೋಗಿಗೆ ಪರೀಕ್ಷೆ ವರದಿ ತಿಳಿಸುತ್ತಾರೆ. ಆದರೆ, ವರದಿ ಬಂದ 2-3 ದಿನಕ್ಕೆ ವೆಬ್ಸೈಟ್ಗೆ ಅಪ್ಲೋಡ್ ಮಾಡುತ್ತಾರೆ. ಹೀಗಾಗಿ ಸೋಂಕಿತರನ್ನು ಆಸ್ಪತ್ರೆಗೆ ರವಾನಿಸುವುದಕ್ಕೆ ತಡವಾಗುತ್ತಿದೆ ಎಂದು ಬಿಬಿಎಂಪಿ ಆರೋಪಿಸಿದೆ.
ನಗರದಾದ್ಯಂತ ರೋಗ ನಿರೋಧಕ ಔಷಧಿ ಸಿಂಪಡಣೆ
ನಗರದ ಅಸ್ಪತ್ರೆಗಳು ಹಾಗೂ ಪ್ರಮುಖ ಸರಕಾರಿ ಕಟ್ಟಡಗಳಲ್ಲಿ ರಾಜ್ಯ ಅಗ್ನಿಶಾಮಕ ದಳದಿಂದ ವಿಶೇಷ ವಾಹನಗಳ ಮೂಲಕ ವ್ಯಾಪಕವಾಗಿ ರೋಗ ನಿರೋಧಕ ಔಷಧಿ ಸಿಂಪಡಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನ ಎಲ್ಲ ಪ್ರಮುಖ ಅಸ್ಪತ್ರೆಗಳ ಒಳಗೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನೂರಾರು ಅಗ್ನಿಶಾಮಕ ದಳ ಸಿಬ್ಬಂದಿ ವಿಶೇಷ ವಾಹನಗಳಲ್ಲಿ ಸುಧಾರಿತ ಜೆಟ್ ಮೂಲಕ ರೋಗ ನಿರೋಧಕ ಔಷಧಿಯನ್ನು ಸಿಂಪಡಿಸಿದರು.