ಕಲ್ಯಾಣ ಕರ್ನಾಟಕಕ್ಕೆ ನವೀಕರಿಸಬಹುದಾದ 650 ಹಾಸಿಗೆಗಳ ರವಾನೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.18: ರಾಜ್ಯದಲ್ಲಿ ಕೊರೋನ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತಿತರ ಕಡೆ ಸೋಂಕಿತರಿಗೆ ಬೆಡ್ಗಳ ಕೊರತೆ ಉಂಟಾಗಿದ್ದು, ಅವರ ಪ್ರಾಣಕ್ಕೂ ಸಂಚಾರ ಉಂಟಾಗಿದೆ. ಇಂಥ ಸಂಕಷ್ಟ ಸನ್ನಿವೇಶದಲ್ಲಿ ಅತಿ ಕಡಿಮೆ ವೆಚ್ಚ, ಸುಲಭ ಸಾಗಣೆ, 350 ಕೆಜಿಯಷ್ಟು ಭಾರ ತಡೆಯಬಹುದಾದ ಶೇ. 100 ರಷ್ಟು ನವೀಕರಿಸಬಹುದಾದ ಪರಿಸರ ಸ್ನೇಹಿ 650 ಬೆಡ್ಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೊಡ್ಡಬಳ್ಳಾಪುರದಿಂದ ಕಲ್ಯಾಣ ಕರ್ನಾಟಕಕ್ಕೆ ಸಾಗಣೆ ಮಾಡಲು ಶನಿವಾರ ಹಸಿರು ನಿಶಾನೆ ತೋರಿದರು.
ಹಾಸಿಗೆ, ದಿಂಬು ಎಲ್ಲ ಸೇರಿ ಬೆಡ್ವೊಂದಕ್ಕೆ ಕೇವಲ ಒಂದು ಸಾವಿರ ರೂ.ಗಳಿಗೂ ಕಡಿಮೆ ವೆಚ್ಚ. ಇಂಥ ಬೆಡ್ಗಳನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುಲ್ಬರ್ಗಾಕ್ಕೆ 550 ಹಾಗೂ ರಾಯಚೂರಿಗೆ 100 ಒಟ್ಟು 650 ಬೆಡ್ಗಳನ್ನು ಇಲ್ಲಿನ ವಾಡ್ ಪ್ಯಾಕ್ ಸಂಸ್ಥೆಯಿಂದ ಖರೀದಿಸಿದ್ದು, ಡಿ.ಕೆ.ಶಿವಕುಮಾರ್ ಅವುಗಳನ್ನು ಖುದ್ದು ಪರಿಶೀಲನೆ ಮಾಡಿ ಕಳುಹಿಸಿಕೊಟ್ಟರು.
ಈ ಬೆಡ್ ಗಳ ಗುಣಮಟ್ಟವನ್ನು ನಾನು ಖುದ್ದು ಪರಿಶೀಲಿಸಿದ್ದೇನೆ. ಇವುಗಳನ್ನು ಕೇವಲ 5 ನಿಮಿಷದಲ್ಲಿ ಜೋಡಿಸಬಹುದು. ಅದೇ ರೀತಿ 5 ನಿಮಿಷದಲ್ಲಿ ಬಿಚ್ಚಬಹುದು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವಾಗ ಬೇಕಾದರೂ ಸಾಗಿಸಬಹುದು. ಎಲ್ಲಕ್ಕಿಂತ ಮಿಗಿಲಾಗಿ ಮಡಚಿ ಒಂದೇ ಲಾರಿಯಲ್ಲಿ 650 ಬೆಡ್ಗಳನ್ನು ಸಾಗಿಸಬಹುದು ಎಂದು ಅವರು ಹೇಳಿದರು.
ರಾಜ್ಯ ಸರಕಾರ ದಿನವೊಂದಕ್ಕೆ 850 ರೂ. ದರದಲ್ಲಿ ಬಾಡಿಗೆಗೆ ಬೆಡ್ಗಳನ್ನು ಪಡೆಯಲು ಮುಂದಾಗಿರುವ ಹೊತ್ತಿನಲ್ಲಿ ಕೇವಲ ಒಂದು ಸಾವಿರ ರೂ.ಗೆ ಇದನ್ನು ಖರೀದಿಸಬಹುದಾಗಿರುವುದು ಲಾಭಕರ. ಜತೆಗೆ ಕೊರೋನ ಸೋಂಕಿತರ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಇದೀಗ ರೋಗ ಲಕ್ಷಣ ಇರುವ ಸೋಂಕಿತರು ಹಾಗೂ ರೋಗ ಲಕ್ಷಣ ಇಲ್ಲದ ಸೋಂಕಿತರು ಎಂಬ ಅವಶ್ಯಕ ವಿಭಜನೆ ಇಲ್ಲದೆ ಎಲ್ಲರೂ ಒಂದೇ ಕಡೆ ದಾಖಲಾಗಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಒತ್ತಡ ಹೆಚ್ಚಾಗಿದೆ. ಈ ರೀತಿಯ ಹಾಸಿಗೆಗಳನ್ನು ಸ್ಟೇಡಿಯಂ, ಕಲ್ಯಾಣ ಮಂಟಪ, ಬಯಲು ಪ್ರದೇಶ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುವುದರಿಂದ ರೋಗ ಲಕ್ಷಣ ಇಲ್ಲದವರಿಗೆ ಇಲ್ಲಿ ಚಿಕಿತ್ಸೆ ನೀಡಬಹುದು ಎಂದು ಅವರು ಹೇಳಿದರು.
ಉಸಿರಾಟದ ತೊಂದರೆ ಮತ್ತಿತರ ಗಂಭೀರ ರೋಗ ಲಕ್ಷಣದಿಂದ ನರಳುತ್ತಿರುವವರು ಹಾಗೂ ವಯಸ್ಸಾದ ಸೋಂಕಿತರಿಗೆ ವೆಂಟಿಲೇಟರ್ ಯುಕ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬಿದ್ದಿರುವ ಒತ್ತಡವನ್ನು ನಿವಾರಿಸಬಹುದಾಗಿದೆ. ಕಡಿಮೆ ದರದಲ್ಲಿ ಸಿಗುವ ಈ ಬೆಡ್ಗಳನ್ನು ನಮ್ಮ ಸರಕಾರ ಖರೀದಿಸಬಹುದು. ತೆಲಂಗಾಣ ಸರಕಾರ ಈಗಾಗಲೇ 5,000ಕ್ಕೂ ಹೆಚ್ಚು ಹಾಸಿಗೆಗಳನ್ನು ಖರೀದಿಸಿದ್ದು, ದಿಲ್ಲಿಯಲ್ಲೂ ಇದೇ ಮಾದರಿ ಹಾಸಿಗೆ ಬಳಸಲಾಗುತ್ತಿದೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ತುರ್ತು ಸಂದರ್ಭದಲ್ಲಿ ಬಳಸಲು ಇಂತಹ ಗುಣಮಟ್ಟದ ಹಾಸಿಗೆ ತಯಾರಿಸುತ್ತಿರುವ ವ್ಯಾಡ್ ಪ್ಯಾಕ್ ಸಂಸ್ಥೆಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ವತಿಯಿಂದ ರಾಜ್ಯ ಸರಕಾರಕ್ಕೂ ಒಂದಷ್ಟು ಹಾಸಿಗೆಗಳನ್ನು ಕೊಡುಗೆ ನೀಡುವ ಯೋಚನೆಯಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಕೊರೋನ ಸಲಕರಣೆಗಳ ವಿಚಾರದಲ್ಲಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೆಕ್ಕ ಕೇಳಿದ್ದಾರೆ. ನಾನು ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ಉತ್ತರ ಕೇಳಿದ್ದೇನೆ. ಸರಕಾರದ ಈ ಅಕ್ರಮ ವಿರುದ್ಧದ ಹೋರಾಟವನ್ನು ಪಕ್ಷದಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.









