ಕಟೀಲು ದೇವಳದ ವಿರುದ್ಧ ಹೇಳಿಕೆ: ಆರೋಪಿಗಳಿಗೆ ಜಾಮೀನು
ಉಡುಪಿ, ಜು.19: ಕಟೀಲು ದೇವಸ್ಥಾನದ ಅಸ್ರಣ್ಣರ ಆಡಳಿತ ವೈಫಲ್ಯ, ವಿಶೇಷ ಪೂಜೆ, ಯಕ್ಷಗಾನ ಮೇಳ, ಹಣ ಸಂದಾಯ ದುರುಪಯೋಗ ಸೇರಿದಂತೆ ವಿವಿಧ ಅವ್ಯವಹಾರಗಳ ಬಗ್ಗೆ ಹೇಳಿಕೆ ನೀಡಿರುವ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿದೆ.
ಆರೋಪಿಗಳಾದ ವಸಂತ ಗಿಳಿಯಾರ್, ಸಂಜೀವ ಮಡಿವಾಳ, ಅನಂತ ರಾಜ್ ರಾವ್ ಈ ವಿಚಾರಗಳ ಕುರಿತು ಯೂಟ್ಯೂಬ್ ಮೂಲಕ ಪ್ರಸಾರ ಮಾಡಿ, ಕಟೀಲು ಅಭಿವೃದ್ಧಿ ಗ್ರೂಪ್ ಎಂಬ ವಾಟ್ಸಾಪ್ ಗುಂಪು ರಚಿಸಿ ಕಟೀಲು ದೇವಸ್ಥಾನದ ಭಕ್ತರಲ್ಲಿ ಗುಂಪುಗಾರಿಕೆ ಕಾರಣವಾಗುವ ಹೇಳಿಕೆ ನೀಡುವ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಕಡಂದಲೆಯ ಸ್ಕಂದ ಪ್ರಸಾದ್ ಭಟ್ ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಜಾಮೀನು ಅರ್ಜಿಗೆ ಸಂಬಂಧಿಸಿ ವಾದ ಪ್ರತಿವಾದವನ್ನು ಆಲಿಸಿದ ಮೂಡಬಿದ್ರೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಯಶವಂತ್ ಕುಮಾರ್ ಮೂವರು ಆರೋಪಿಗಳಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ. ಆರೋಪಿತರ ಪರವಾಗಿ ಉಡುಪಿಯ ನ್ಯಾಯವಾದಿಗಳಾದ ಆರೂರು ಸುಕೇಶ್ ಶೆಟ್ಟಿ, ಗಿರೀಶ್ ಎಸ್.ಪಿ. ಏಳಿಂಜೆ, ಸಂತೋಷ್ ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.