ಜಾರ್ಖಂಡ್ ಬರ ಪರಿಹಾರ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ: ಪರಿಹಾರದಿಂದ ವಂಚಿತರಾದ 7 ಲಕ್ಷ ರೈತರು
ಸಾಂದರ್ಭಿಕ ಚಿತ್ರ
ರಾಂಚಿ, ಜು. 19: ಜಾರ್ಖಂಡ್ ನ 7 ಜಿಲ್ಲೆಗಳ 55 ಬ್ಲಾಕ್ ಗಳನ್ನು ಬರ ಪೀಡಿತ ಎಂದು ಘೋಷಿಸುವ ರಾಜ್ಯದ ಸರಕಾರದ ಪ್ರಸ್ತಾಪವನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಬರದಿಂದ ಬೆಳೆ ಹಾನಿ ಅನುಭವಿಸಿದ ರಾಜ್ಯದ 7 ಲಕ್ಷಕ್ಕೂ ಅಧಿಕ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ.
ರಾಜ್ಯದ ಏಳು ಜಿಲ್ಲೆಗಳಾದ ಬೊಕಾರೊ, ಚಾತ್ರ, ಪಾಕುರ್, ದಿಯೋಘರ್, ಗಿರಿಧಿ, ಗೊಡ್ಡಾ ಹಾಗೂ ಹಝಾರಿಬಾಗ್ ನ 55 ಬ್ಲಾಕ್ ಗಳನ್ನು ಬರ ಪೀಡಿತ ಎಂದು ಅನುಮೋದನೆ ನೀಡಿದ ಬಳಿಕ ಬರದ ಕುರಿತ ಕೈಪಿಡಿ ಪ್ರಕಾರ ಪರಿಹಾರ ಕೊರಿ ಜಾರ್ಖಂಡ್ ಸಂಪುಟ ಪ್ರಸ್ತಾಪವನ್ನು ಕಳೆದ ವರ್ಷ ಎಪ್ರಿಲ್ ನಲ್ಲಿ ಮಂಜೂರು ಮಾಡಿತ್ತು. ಈ ಪ್ರಸ್ತಾಪವನ್ನು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮೇಯಲ್ಲಿ ಕೇಂದ್ರಕ್ಕೆ ಕಳುಹಿಸಿತ್ತು.
“ನಾವು ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಟ್ಟಿದ್ದೆವು. ಆದರೆ, ಅದನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ’’ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಜಂಟಿ ಕಾರ್ಯದರ್ಶಿ ಮನೀಶ್ ತಿವಾರಿ ತಿಳಿಸಿದ್ದಾರೆ. “ನಿಧಿ ಕೇಂದ್ರದಿಂದ ಬರದಿದ್ದರೆ ವಿಪತ್ತು ನಿರ್ವಹಣಾ ಇಲಾಖೆ ಪರಿಹಾರ ನೀಡಲು ಸಾಧ್ಯವಿಲ್ಲ. ನಮಗೆ ಕೇಂದ್ರದಿಂದ ನಿಧಿ ಬರದೇ ಇದ್ದರೆ, ನಾವು ರೈತರಿಗೆ ಪರಿಹಾರ ನೀಡುವುದು ಹೇಗೆ ?” ಎಂದು ತಿವಾರಿ ಪ್ರಶ್ನಿಸಿದ್ದಾರೆ.