ರಾಜ್ಯದಲ್ಲಿ ಮತ್ತೆ 4 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್ ದೃಢ: 63 ಸಾವಿರ ಮೀರಿದ ಸೋಂಕಿತರ ಸಂಖ್ಯೆ
24 ಗಂಟೆಗಳಲ್ಲಿ 91 ಮಂದಿ ಸೋಂಕಿಗೆ ಬಲಿ

ಬೆಂಗಳೂರು, ಜು.19: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ನಾಲ್ಕು ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗುತ್ತಿವೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್19 ಅಟ್ಟಹಾಸ ಮೆರೆಯುತ್ತಿದೆ.
ಶನಿವಾರ ಸಂಜೆಯಿಂದ ರವಿವಾರ ಸಂಜೆವರೆಗೆ ಮತ್ತೆ 4,120 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 63,772ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 91 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 1331 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 36 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 11, ಕೋಲಾರ 5, ಗದಗ 4, ಕೊಪ್ಪಳ 4, ಧಾರವಾಡ 4, ಬೀದರ್ 3, ಬಳ್ಳಾರಿ 3, ಕಲಬುರಗಿ 3, ದಾವಣಗೆರೆ 2, ಬೆಳಗಾವಿ 2, ಬಾಗಲಕೋಟೆ 2, ಹಾವೇರಿ 2, ಮಂಡ್ಯ 2, ಹಾಸನ 2, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2156, ದಕ್ಷಿಣ ಕನ್ನಡ 285, ವಿಜಯಪುರ 171, ಚಿಕ್ಕಮಗಳೂರು 135, ಉಡುಪಿ 134, ಧಾರವಾಡ 126, ಮೈಸೂರು 110, ಶಿವಮೊಗ್ಗ 104, ಬೆಳಗಾವಿ 87, ಬಳ್ಳಾರಿ 73, ಬೆಂಗಳೂರು ಗ್ರಾಮಾಂತರ 70, ಉತ್ತರ ಕನ್ನಡ 69, ಕಲಬುರಗಿ 69, ದಾವಣಗೆರೆ 62, ಬಾಗಲಕೋಟೆ 60, ಹಾವೇರಿ 54, ಬೀದರ್ 45, ಹಾಸನ 43, ಚಿಕ್ಕಮಗಳೂರು 41, ರಾಯಚೂರು 32, ಗದಗ 30, ರಾಮನಗರ 29, ಕೋಲಾರ 25, ಚಾಮರಾಜನಗರ 25, ಕೊಪ್ಪಳ 19, ತುಮಕೂರು 19, ಚಿತ್ರದುರ್ಗ 17, ಕೊಡಗು 13, ಯಾದಗಿರಿ 10, ಮಂಡ್ಯದಲ್ಲಿ 7 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 63,772 ಕೊರೋನ ಸೋಂಕಿತರ ಪೈಕಿ 23,065 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 1,290 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 1,331 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 39,370 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.








