ಬೆಳ್ತಂಗಡಿ: ಕೊರೋನ ಸೋಂಕಿಗೆ 4ನೇ ಬಲಿ
ಬೆಳ್ತಂಗಡಿ, ಜು.20: ಕೊರೋನ ವೈರಸ್ ಸೋಂಕಿಗೆ ಬೆಳ್ತಂಗಡಿ ತಾಲೂಕಿನಲ್ಲಿ 4ನೇ ಬಲಿಯಾಗಿದ್ದು, ರವಿವಾರ ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ನೆರಿಯ ಗ್ರಾಮದ ನಿವಾಸಿಯೊಬ್ಬರು ಸೋಂಕಿಗೆ ಪಾಸಿಟಿವ್ ಆಗಿರುವುದು ಇಂದು ದೃಢಪಟ್ಟಿದೆ.
ನೆರಿಯ ಗ್ರಾಮದ ದೇವಗಿರಿ ನಿವಾಸಿ, ಮೂಡುಬಿದ್ರೆಯಲ್ಲಿ ವಾಹನ ಚಾಲಕ ವೃತ್ತಿ ಮಾಡಿಕೊಂಡಿದ್ದ 43 ವರ್ಷದ ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ರವಿವಾರ ಸಂಜೆ ಮೃತಪಟ್ಟಿದ್ದರು. ಬಳಿಕ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು, ಅವರು ಕೊರೋನ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.
ತಾಲೂಕಿನ ಮಡಂತ್ಯಾರ್ ಗ್ರಾಪಂ ವ್ಯಾಪ್ತಿಯ ಕುಕ್ಕಳ ಗ್ರಾಮದ 55 ವರ್ಷದ ಮಹಿಳೆಯೊಬ್ಬರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಮಹಿಳೆಗೆ ಮೂರು ದಿನಗಳ ಹಿಂದೆ ಜ್ವರ ಬಂದ ಹಿನ್ನೆಲೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಗಂಟಲ ದ್ರವ ಪರೀಕ್ಷಿಸಿದಾಗ ಕೊರೋನಗೆ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಮನೆ ಮತ್ತು ಅವರ ಪುತ್ರ ನಡೆಸುತ್ತಿರುವ ಫ್ಯಾನ್ಸಿ ಮಳಿಗೆಯನ್ನು ಸೀಲ್ಡೌನ್ ಮಾಡಲಾಗಿದೆ.