ಮೆಟ್ರೊ ರೈಲು ಮಾರ್ಗ ನಿರ್ಮಾಣದ 79 ಕಾರ್ಮಿಕರಿಗೆ ಕೊರೋನ ದೃಢ
ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಯೋಜನೆಗೆ ತಡೆ: ಹೈಕೋರ್ಟ್ ಮೌಖಿಕ ಎಚ್ಚರಿಕೆ
ಬೆಂಗಳೂರು, ಜು.20: ಮೆಟ್ರೊ ರೈಲು ಮಾರ್ಗ ನಿರ್ಮಾಣದ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಕೊರೋನ ಸೋಂಕು ತಗುಲಿದೆ ಎಂಬ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಬಿಎಂಆರ್ಸಿಎಲ್ಗೆ ಕಾರ್ಮಿಕರಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಮೂಲಕ ಗುಣಮುಖರನ್ನಾಗಿಸಬೇಕು ಹಾಗೂ ಬಿಎಂಆರ್ಸಿಎಲ್ ರೋಗ ಹರಡುವ ಕೇಂದ್ರವಾಗಬಾರದು ಎಂದು ಎಚ್ಚರಿಕೆ ನೀಡಿದೆ.
ಕೊರೋನ ಸೋಂಕು ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಬಿಎಂಆರ್ಸಿಎಲ್ ಪರ ವಾದಿಸಿದ ವಕೀಲರು, ಕಣ್ಣೂರು ಕ್ಯಾಂಪ್ನಲ್ಲಿ 211 ಮಂದಿ ಕಾರ್ಮಿಕರಿದ್ದಾರೆ. ಈ ಕ್ಯಾಂಪ್ನ 140 ಮಂದಿಗೆ ಕೊರೋನ ತಪಾಸಣೆ ನಡೆಸಿದಾಗ 79 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು 211 ಮಂದಿ ಕಾರ್ಮಿಕರು ಇರುವ ಕ್ಯಾಂಪ್ನಲ್ಲಿ 79 ಜನಕ್ಕೆ ಕೊರೋನ ಬಂದಿದೆ ಎಂದರೆ ನಿಮ್ಮ ಕಾರ್ಯನಿರ್ವಹಣೆ ಎಷ್ಟರ ಮಟ್ಟಿಗೆ ಉತ್ತಮವಾಗಿದೆ. ಕಣ್ಣೂರಿನಲ್ಲಿ ಎಷ್ಟು ಕಾರ್ಮಿಕರ ಕ್ಯಾಂಪ್ಗಳಿವೆ. ಸೋಂಕಿತರನ್ನು ಪ್ರತ್ಯೇಕ ಕ್ಯಾಂಪ್ನಲ್ಲಿ ಇರಿಸಲಾಗಿದೆಯೇ. ಕಾರ್ಮಿಕರ ಸುರಕ್ಷತೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ.
ಕ್ವಾರಂಟೈನ್ಗೆ ಒಳಗಾಗಿರುವ ಕಾರ್ಮಿಕರಿಗೆ ವೇತನ ಪಾವತಿಸಲಾಗುತ್ತಿದೆಯೇ ಎಂದು ಹಲವು ಪ್ರಶ್ನೆಗಳನ್ನು ಕೇಳಿತು. ಇದಕ್ಕೆ ಬಿಎಂಆರ್ಸಿಎಲ್ ಪರ ವಕೀಲರು ಈ ಎಲ್ಲ ವಿಷಯಗಳನ್ನು ತಿಳಿದು ಮಾಹಿತಿ ನೀಡುವುದಾಗಿ ತಿಳಿಸಿದರು.
ಅಸಮರ್ಪಕ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಬಿಎಂಆರ್ಸಿಎಲ್ ಎಲ್ಲ ಸಂಸ್ಥೆಗಳಂತೆ ಅಲ್ಲ. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ. ಮೆಟ್ರೊ ಕೊರೋನ ಹರಡುವ ಕೇಂದ್ರವಾಬಾರದು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿತು.
ಬಳಿಕ ಕಾರ್ಮಿಕರ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ ಮುಂದಿನ ವಿಚಾರಣೆ ವೇಳೆ ಸಮಗ್ರ ಮಾಹಿತಿಯುಳ್ಳ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಜು.23ಕ್ಕೆ ಮುಂದೂಡಿತು.







