ನೆರಿಯ: ಕೋವಿಡ್ಗೆ ಬಲಿಯಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕಾರ್ಯಕರ್ತರಿಂದ ಸಹಕಾರ
ಬೆಳ್ತಂಗಡಿ, ಜು.21: ಕೋವಿಡ್-19 ಸೋಕಿನಿಂದ ಮೃತಪಟ್ಟ ತಾಲೂಕಿನ ನೆರಿಯ ಗ್ರಾಮದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ. ಜಿಲ್ಲಾ ಕಾರ್ಯಕರ್ತರು ಸಹಕರಿಸಿದರು.
ಮೂಲತಃ ನೆರಿಯ ಗ್ರಾಮದ ದೇವಗಿರಿ ನಿವಾಸಿ, ಸದ್ಯ ಮೂಡುಬಿದಿರೆಯಲ್ಲಿ ನೆಲೆಸಿ ಬಸ್ ಚಾಲಕರಾಗಿ ದುಡಿಯುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರು ಕೊರೋನ ವೈರಸ್ ಸೋಂಕಿನಿಂದ ಸೋಮವಾರ ಮೃತಪಟ್ಟಿದ್ದರು.
ಅಂತ್ಯಕ್ರಿಯೆಗಾಗಿ ಕೋವಿಡ್ ಮಾರ್ಗಸೂಚಿಯನ್ನೆಲ್ಲ ಪೂರ್ಣಗೊಳಿಸಿ ಮೃತದೇಹವನ್ನು ನೆರಿಯ ಗಂಡಿಬಾಗಿಲು ಚರ್ಚ್ ಗೆ ಆ್ಯಂಬುಲೆನ್ಸ್ ಮೂಲಕ ತರಲಾಗಿತ್ತು. ಆದರೆ ಅಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಅಂತ್ಯಕ್ರಿಯೆ ನೆರವೇರಿಸಲು ಸೂಕ್ತ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಈ ಸಂದರ್ಭ ಆ್ಯಂಬುಲೆನ್ಸ್ ಚಾಲಕ ಎಸ್ಕೆಎಸ್ಸೆಸ್ಸೆಫ್ ವಿಖಾಯ ಜಿಲ್ಲಾ ಘಟಕವನ್ನು ಸಂಪರ್ಕಿಸಿದರು. ಅದರಂತೆ ಸ್ಥಳಕ್ಕೆ ಆಗಮಿಸಿದ ವಿಖಾಯ ಜಿಲ್ಲಾ ಘಟಕದ ಅಧ್ಯಕ್ಷ ಇಸ್ಮಾಯೀಲ್ ತಂಙಳ್, ಕನ್ವೀನರ್ ಆಸಿಫ್ ಕಬಕ, ಉಪ್ಪಿನಂಗಡಿ ವಲಯ ವಿಖಾಯ ಕಾರ್ಯದರ್ಶಿ ಸಿದ್ದೀಕ್ ನೀರಾಜೆ ಹಾಗೂ ಸ್ಥಳೀಯ ಅಜಿತ್ ಗಂಡಿಬಾಗಿಲು ಎಂಬವರು ಅಂತ್ಯಕ್ರಿಯೆ ನೆರವೇರಿಸಲು ಸಹಕರಿಸಿದರು.