ಛತ್ತೀಸ್ಗಡ ಸಿಎಂ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಒಮರ್ ಅಬ್ದುಲ್ಲಾ

ಶ್ರೀನಗರ, ಜು.21: ತಾನು ಗೃಹ ಬಂಧನದಿಂದ ಬಿಡುಗಡೆಯಾಗಿರುವುದನ್ನು ಪ್ರಶ್ನಿಸಿದ್ದಲ್ಲದೆ, ಇದಕ್ಕೆ ರಾಜಸ್ಥಾನದ ರಾಜಕೀಯ ಬೆಳವಣಿಗೆಯನ್ನು ತಳುಕು ಹಾಕಿರುವ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಎಚ್ಚರಿಕೆ ನೀಡಿದ್ದಾರೆ.
ಒಮರ್ ಹಾಗೂ ಮೆಹಬೂಬಾ ಮುಫ್ತಿ ಅವರನ್ನು ಕಾನೂನಿನ ಒಂದೇ ಸೆಕ್ಷನ್ ಅಡಿ ಬಂಧಿಸಲಾಗಿತ್ತು. ಆದರೆ ಮುಫ್ತಿ ಇನ್ನೂ ಬಂಧನಮುಕ್ತವಾಗಿಲ್ಲ. ಒಮರ್ ಬಂಧನ ಮುಕ್ತರಾಗಿದ್ದಾರೆ. ಇದಕ್ಕೆ ಒಮರ್ ಅಬ್ದುಲ್ಲಾರ ಸಹೋದರಿಯ ಪತಿ ಸಚಿನ್ ಪೈಲಟ್ ಕಾರಣರೇ?ಎಂದು 'ದಿ ಹಿಂದೂ'ಗೆ ನೀಡಿರುವ ಸಂದರ್ಶನವೊಂದರಲ್ಲಿ ಬಘೇಲ ಪ್ರಶ್ನಿಸಿದ್ದರು.
ಈ ವರ್ಷಾರಂಭದಲ್ಲಿ ನಾನು ಹಾಗೂ ನನ್ನ ತಂದೆ ಬಂಧನದಿಂದ ಬಿಡುಗಡೆಯಾಗಿರುವುದರ ಹಿಂದೆ ಸಚಿನ್ ಪೈಲಟ್ ಇದ್ದಾರೆ ಎನ್ನುವುದು ಸುಳ್ಳು ಹಾಗೂ ದುರುದ್ದೇಶ ಪೂರಿತ ಆರೋಪವಾಗಿದೆ. ಈ ಆರೋಪದಿಂದ ನಾನು ಬೇಸರಗೊಂಡಿದ್ದೇನೆ. ನಿಮ್ಮ ಉತ್ತರವನ್ನು ನನ್ನ ವಕೀಲರ ಮೂಲಕ ಕಳುಹಿಸಿ ಎಂದು ಒಮರ್ ಟ್ವೀಟ್ ಮಾಡಿದ್ದಾರೆ.





