ದಲಿತ ಯುವಕನನ್ನು ಅರೆಬೆತ್ತಲುಗೊಳಿಸಿ ಹಲ್ಲೆ ನಡೆಸಿರುವ ಘಟನೆ ಅಮಾನವೀಯ: ಎಸ್ಡಿಪಿಐ

ಇಲ್ಯಾಸ್ ಮುಹಮ್ಮದ್ ತುಂಬೆ
ಬೆಂಗಳೂರು, ಜು.21: ಬೈಕ್ ಮುಟ್ಟಿದ್ದನ್ನೆ ನೆಪವಾಗಿಟ್ಟುಕೊಂಡು ದಲಿತ ಯುವಕನನ್ನು ಸವರ್ಣಿಯ ಗುಂಪೊಂದು ಅರೆಬೆತ್ತಲುಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದ್ದು, ಇದು ಅತ್ಯಂತ ಅವಮಾನವೀಯ ಹಾಗೂ ಖಂಡನೀಯ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಸೌಹಾರ್ದತೆ ಮತ್ತು ಶಾಂತಿಯ ಬೀಡು ಆಗಿರುವ ನಮ್ಮ ರಾಜ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆಯಿಂದ ಕಪ್ಪು ಚುಕ್ಕೆ ದೊರೆತಂತಾಗಿದೆ. ಸಂತ್ರಸ್ತನ ತಂದೆ ಯಂಕಪ್ಪ ಹುಸೇನಪ್ಪ ತಳವಾರರವರ ನೀಡಿದ ದೂರಿನ ಮೇರೆಗೆ 13ಕ್ಕೂ ಹೆಚ್ಚು ಸವರ್ಣೀಯ ಮಂದಿಯ ಮೇಲೆ ತಾಳಿಕೋಟಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಒಬ್ಬನನ್ನು ಮಾತ್ರ ವಿಚಾರಣೆ ನಡೆಸಿ ಕೈ ತೊಳೆದುಕೂಂಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಪ್ರದಾಯದಂತೆ ಈ ಪ್ರಕರಣವನ್ನು ಇಲಾಖೆ ಮುಚ್ಚು ಹಾಕಲಿದೆ ಎಂಬ ಆತಂಕ ಜನತೆಗೆ ಕಾಡುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಪೊಲೀಸ್ ಇಲಾಖೆ ಪ್ರಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
25ಕ್ಕೂ ಹೆಚ್ಚು ಜನರಿದ್ದ ಕಿಡಿಗೇಡಿಗಳ ಗುಂಪು ಅಮಾಯಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದಲ್ಲದೇ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವುದು ಗಮನಿಸಿದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬುವುದಕ್ಕೆ ಸರಕಾರವೇ ಉತ್ತರಿಸಬೇಕಾಗಿದೆ ಎಂದು ಇಲ್ಯಾಸ್ ತಿಳಿಸಿದ್ದಾರೆ.
ಆರೋಪಿಗಳೆಲ್ಲರೂ ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರ ಹಿಂಬಾಲಕರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಶಾಸಕರ ಬೆಂಬಲದಿಂದಲೇ ರಾಜರೋಷವಾಗಿ ಇಂತಹ ಕುಕೃತ್ಯಗಳಲ್ಲಿ ಕಿಡಿಗೇಡಿಗಳು ತೊಡಗಿದ್ದಾರೆ ಎಂಬ ಕಟು ಸತ್ಯವನ್ನು ಮರೆಮಾಚಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ನಿಗಾವಹಿಸಬೇಕೆಂದು ಇಲ್ಯಾಸ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







