ಮೂರು ತಿಂಗಳ ಬಾಕಿ ಸಂಬಳಕ್ಕೆ ಆಗ್ರಹಿಸಿ ಪೌರ ಕಾರ್ಮಿಕರ ಧರಣಿ
ಬೆಂಗಳೂರು, ಜು.21: ಮೂರು ತಿಂಗಳ ಸಂಬಳ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪೌರ ಕಾರ್ಮಿಕರು ಮಂಗಳವಾರ ಬಿಬಿಎಂಪಿ ಮುಂದೆ ಧರಣಿ ನಡೆಸಿದರು.
ಕೊರೋನದಿಂದ ಈಗಾಗಲೇ ನಾಲ್ಕು ಜನ ಪೌರ ಕಾರ್ಮಿಕರು ಬಲಿಯಾಗಿದ್ದಾರೆ. 50ಕ್ಕೂ ಹೆಚ್ಚು ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದರೂ ಬಿಬಿಎಂಪಿ ಇನ್ನು ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಗಮನ ಹರಿಸದೇ ಸರಿಯಾದ ಮಾಸ್ಕ್ ಹಾಗೂ ಗ್ಲೌಸ್ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿ ಪೌರಕಾರ್ಮಿಕರಿಗೂ ಕೊರೋನ ಟೆಸ್ಟ್ ಮಾಡಿಸಬೇಕು. ಮಾಸ್ಕ್ ಹಾಗೂ ಗ್ಲೌಸ್ ಸೇರಿದಂತೆ ಪಿಪಿಇ ಕಿಟ್ಗಳನ್ನು ನೀಡಬೇಕು. ಕಸದ ಗಾಡಿಯನ್ನು ತೊಳೆಯಲು ಕ್ರಿಮಿನಾಶಕ ನೀಡಬೇಕು. ಪ್ರತಿಯೊಬ್ಬರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ನೀಡಬೇಕು. ಪ್ರತಿ ಬಟ್ಟೆ ಬದಲಿಸಲು ಹಾಗೂ ಸ್ನಾನ ಗೃಹಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪಾಸಿಟಿವ್ ಬಂದ ಪೌರಕಾರ್ಮಿಕರಿಗೆ ಸಾಂಸ್ಥಿಕ ಕ್ವಾರಂಟೀನ್ ವ್ಯವಸ್ಥೆ ಮಾಡಬೇಕು. ಕಂಟೈನ್ಮೆಂಟ್ ಏರಿಯಾಗಳಿಂದ ಉತ್ಪತ್ತಿಯಾದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಪೌರಕಾರ್ಮಿಕರಿಗೆ ನೀಡಬೇಕಾದ ವೇತನವನ್ನು ಸಾರಿಗೆ ವೆಚ್ಚ ಒಳಗೊಂಡಂತೆ ಈ ಕೂಡಲೇ ಬಿಡುಗಡೆ ಮಾಡಬೇಕು. ಪೌರಕಾರ್ಮಿಕರಿಗಾಗಿ ಪ್ರತ್ಯೇಕ ಸಹಾಯವಾಣಿ ತೆರೆಯಬೇಕು ಎಂದು ಆಗ್ರಹಿಸಿದರು.