ಬಜ್ಪೆ: ಪತ್ನಿಯನ್ನು ಕೊಲೆಗೈದ ಪ್ರಕರಣ: ಆರೋಪಿಗೆ 15 ದಿನ ನ್ಯಾಯಾಂಗ ಬಂಧನ
ಮಂಗಳೂರು, ಜು.21: ಬಜ್ಪೆಯ ಕರಂಬಾರು ಅಂತೋಣಿಕಟ್ಟೆ ಸಮೀಪ ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ ಪ್ರಕರಣದ ಆರೋಪಿ ಗಣೇಶ್ ಕುಮಾರ್(35) ಅವರಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನವನ್ನು ಮಂಗಳವಾರ ವಿಧಿಸಿದೆ.
ಕಾವೂರು ನಿವಾಸಿ ಹಾಗೂ ಪ್ರಕರಣದ ಆರೋಪಿ ಗಣೇಶ್ ಕುಮಾರ್ನ ಕೊರೋನ ಪರೀಕ್ಷಾ ವರದಿಯು ನೆಗೆಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾಗಾಗಿ ಇದೀಗ ಆತನನ್ನು ಆಸ್ಪತ್ರೆಯಿಂದ ನಗರದ ಸಬ್ ಜೈಲಿಗೆ ವರ್ಗಾಯಿಸಲಾಗಿದೆ.
ಪ್ರಕರಣದ ಆರೋಪಿ ಗಣೇಶ್ ಕುಮಾರ್ ಎಂಬವರು ಪತ್ನಿ ಶಾಂತಾ (30) ಅವರನ್ನು ಜು.1ರಂದು ಸಂಜೆ ಕಾವೂರಿನ ಮನೆಯಿಂದ ಕರೆದುಕೊಂಡು ಹೋಗಿ ಕರಂಬಾರು ಅಂತೋಣಿಕಟ್ಟೆಯ ಬಳಿ ಕಲ್ಲಿನಕೋರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ ಎಂದು ದೂರು ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಜು.5ರಂದು ಗಣೇಶ್ ಕುಮಾರ್ನನ್ನು ಕಾವೂರು ಪೊಲೀಸರು ಬಂಧಿಸಿದ್ದರು. ಆತನನ್ನು ಕೊರೋನ ಪರೀಕ್ಷೆಗೆ ಒಳಪಡಿಸಿದ್ದು, ಜು.8ರಂದು ವರದಿ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂದರ್ಭ ಆತನ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಕಾವೂರು ಠಾಣೆಯ ಇನ್ಸ್ಪೆಕ್ಟರ್ ಸಹಿತ ನಾಲ್ವರು ಪೊಲೀಸರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಕೆಲವು ದಿನಗಳ ಬಳಿಕ ಗಣೇಶ್ ಕುಮಾರ್ನನ್ನು ಮತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗಲೂ ಪಾಸಿಟಿವ್ ಬಂದಿತ್ತು. ಆದರೆ 3ನೇ ಬಾರಿ ಆತನನ್ನು ಕೊರೋನ ಟೆಸ್ಟ್ಗೆ ಒಳಪಡಿಸಿದ್ದು, ಮಂಗಳವಾರ (ಜು. 21) ವರದಿ ನೆಗೆಟಿವ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕಾವೂರು ಪೊಲೀಸ್ ಠಾಣೆಗೆ ಕರೆದೊಯ್ದು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಧೀಶರು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.
ಇದೀಗ ಆರೋಪಿ ಗಣೇಶ್ ಕುಮಾರ್ನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಂಗಾವಲಾಗಿ ನಿಂತಿದ್ದ ನಾಲ್ವರು ಪೊಲೀಸರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.